ಮಂಗಳೂರು,ಜುಲೈ.29 : ಕ್ಷೀಣಿಸುತ್ತಿರುವ ಕನ್ನಡ ಹವ್ಯಾಸಿ ರಂಗಭೂಮಿಗೆ ಪುನರ್ಶ್ಚೇತನ ನೀಡುವ ಸಲುವಾಗಿ ಕರ್ನಾಟಕ ಸರಕಾರ ಸದ್ಯವೇ ಹೊಸಯೋಜನೆಯೊಂದನ್ನು ಸಿದ್ದಪಡಿಸುವುದೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವೆ ಉಮಾಶ್ರೀ ತಿಳಿಸಿದರು.
ಅವರು ಮಂಗಳೂರು ಸರ್ಕಿಟ್ಹೌಸ್ನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಕಾಸರಗೋಡು ಚಿನ್ನಾ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ವಿ.ಜಿ.ಪಾಲ್, ನಾಟಕಕಾರ, ನ್ಯಾಯವಾದಿ ಶಶಿರಾಜ್ ರಾವ್ ಕಾವೂರು, ಸಂಘಟಕ ಸುಹಾಸ್ ರಾವ್, ಕಲಾಪೋಷಕ ನಿತಿನ್ ಪಾಲ್ ಮೊದಲಾದವರನ್ನೊಳಗೊಂಡ ನಿಯೋಗವನ್ನುದ್ದೇಶಿಸಿ ಹೇಳಿದರು.
ಕರ್ನಾಟಕ ರಾಜ್ಯದ ಮಹಿಳೆಯರಿಗಾಗಿ ರಾಜ್ಯ ಮಟ್ಟದ ನಾಟಕ ರಚನಾ ಕಾರ್ಯಾಗಾರವನ್ನು ಏರ್ಪಡಿಸಬೇಕೆಂದು ಕಾಸರಗೋಡು ಚಿನ್ನಾರವರು ನೀಡಿದ ಸಲಹೆಯನ್ನು ಒಪ್ಪಿಕೊಂಡು ಸಧ್ಯದಲ್ಲಿಯೇ ಈ ಬಗ್ಗೆ ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು. ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳನ್ನು ವಸ್ತುವನ್ನಾಗಿರಿಸಿಕೊಂಡು ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹೊಸ ನಾಟಕಗಳು ತಯಾರಾಗಬೇಕೆಂಬ ತನ್ನ ಚಿಂತನೆಯನ್ನು ವ್ಯಕ್ತಪಡಿಸಿದರು.
ಕುಂಠಿತಗೊಂಡ ದ.ಕ.ಜಿಲ್ಲಾ ರಂಗಮಂದಿರದ ಕುರಿತಾದ ಮಾಹಿತಿಗಳನ್ನು ವಿ.ಜಿ.ಪಾಲ್ ಮತ್ತು ಶಶಿರಾಜ್ರಾವ್ ಕಾವೂರುರವರು ಸವಿವರವಾಗಿ ಸಚಿವೆಗೆ ನೀಡಿದರು. ಜಿಲ್ಲೆಯ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡ ಇವರು ಈ ಬಗ್ಗೆ ಶೀಘ್ರ ಸೂಕ್ತಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಮಾಲೋಚನಾ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಾಮಮೂರ್ತಿ, ನಿರ್ದೇಶಕರಾದ ಕೆ.ಎ.ದಯಾನಂದ ಉಪಸ್ಥಿತರಿದ್ದರು.