ರಾಮೇಶ್ವರ: ಅಗಲಿದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಕಲಾಂ ಅವರ ಪಾರ್ಥಿವ ಶರೀರ, ಅವರ ಹುಟ್ಟೂರಾದ ರಾಮೇಶ್ವರ ತಲುಪಿದ್ದು, ಸಾವಿರಾರು ಮಂದಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಹೊಸದಿಲ್ಲಿಯಿಂದ ಮಧುರೈಗೆ ಭಾರತೀಯ ವಾಯು ಸೇನೆಯ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗಿದ್ದು, ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ರಾಮನಾಥಪುರಮ್ ಜಿಲ್ಲೆಯ ಮಂಡಪಮ್ ಶಿಬಿರಕ್ಕೆ ಸಾಗಿಸಲಾಯಿತು. ಕೇಂದ್ರ ಸಚಿವರಾದ ಮನೋಹರ್ ಪರಿಕರ್ ಮತ್ತು ವೆಂಕಯ್ಯ ನಾಯ್ಡು ಕಲಾಂ ಶರೀರದೊಂದಿಗೆ ಪಯಣಿಸಿದ್ದರು.
ವಿತ್ತ ಸಚಿವ ಒ.ಪನ್ನೀರ್ಸೆಲ್ವಂ ಸೇರಿದಂತೆ ತಮಿಳುನಾಡು ಸಚಿವರು ಹಾಗೂ ಕಲಾಂ ಬಂಧುಗಳು ಮಂಡಪಮ್ ಶಿಬಿರದಲ್ಲಿ ಕಲಾಂ ಶರೀರವನ್ನು ಸ್ವೀಕರಿಸಿದರು. ಮಧ್ಯಾಹ್ನ ಸುಮಾರು 2 ಗಂಟೆಗೆ ಶರೀರ ಅಲ್ಲಿಗೆ ತಲುಪಿದಾಗ ಭಾರತೀಯ ವಾಯು ಪಡೆ ಹಾಗೂ ನೌಕಾ ಪಡೆ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.
ಅಲಂಕೃತ ವಾಹನದಲ್ಲಿ ಕಲಾಂ ಶರೀರವನ್ನು ನಂತರ ರಾಮೇಶ್ವರಂಗೆ ತೆಗೆದುಕೊಂಡು ಹೋಗಲಾಯಿತು. ಆಗ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಭಾರತದ ಹೆಮ್ಮೆಯ ಪುತ್ರನ ಅಂತಿಮ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು.
ರಾತ್ರಿ 8 ಗಂಟೆ ತನಕ ಕಲಾಂ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಕುಟುಂಬದ ಸದಸ್ಯರಿಗೆ ಕಲಾಂ ಶರೀರವನ್ನು ಹಸ್ತಾಂತರಿಸಲಿದ್ದು, ಗುರುವಾರ ಬೆಳಗ್ಗೆ 10,30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.