ಕನ್ನಡ ವಾರ್ತೆಗಳು

ಪ್ರೀತಿಯ ಬಲೆಗೆ ಬಿದ್ದು ನಾಪತ್ತೆಯಾದ ಅಪ್ರಾಪ್ತ ಬಾಲಕಿ : ಆರೋಪಿಗಳಿಬ್ಬರ ಸೆರೆ : ಅತ್ಯಾಚಾರ ಪ್ರಕರಣ ದಾಖಲು

Pinterest LinkedIn Tumblr

ಬಂಟ್ವಾಳ, ಜು.21: ತಾಲೂಕಿನ ವಾಮದಪದವು ಸಮೀಪ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿಯ ನಾಪತ್ತೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಕಲೇಶಪುರ ನಿವಾಸಿ ಮಂಜು (20) ಎಂದು ಗುರುತಿಸಲಾಗಿದ್ದು ಈತನ ವಿರುದ್ಧ ಅಪಹರಣ, ಪೊಸ್ಕೊ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅಪಹರಣಕ್ಕೆ ಸಹಕಾರ ನೀಡಿದ ಆರೋಪದಲ್ಲಿ ಖಾಸಿಂ(41) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಅಂಗಡಿಪಲ್ಕೆ ನಿವಾಸಿ ಅಪ್ರಾಪ್ತ ವಯಸ್ಸಿನ ಬಾಲಕಿ ಜು.7ರಂದು ಅಂಕಪಟ್ಟಿ ತರಲೆಂದು ಮನೆಯಿಂದ ತೆರಳಿದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಯುವಕನೋರ್ವ ತನ್ನ ಪುತ್ರಿಯನ್ನು ಅಪಹರಿಸಿದ್ದಾಗಿ ದೂರು ನೀಡಿದ್ದರು.

ಮೂಡಿಗೆರೆಯ ಬಿಳಗುಲ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು, ಬಾಲಕಿ ಸಹಿತ ಆರೋಪಿ ಮಂಜುನನ್ನು ಪತ್ತೆ ಹಚ್ಚಿದ್ದಾರೆ. ತಮಗೆ ಮದುವೆಯಾಗಲು ಮನೆಯಲ್ಲಿ ಒಪ್ಪಿಗೆ ಇಲ್ಲದ ಹಿನ್ನೆಲೆಯಲ್ಲಿ, ಜೊತೆಯಾಗಿ ತೆರಳಿರುವುದಾಗಿ ಅವರು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ಮಂಜು ಮೂಡಿಗೆರೆಯ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಎನ್ನಲಾಗಿದ್ದು, ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವ ಹಿನ್ನೆಲೆಯಲ್ಲಿ ಆರೋಪಿ ಮಂಜು ವಿರುದ್ಧ ಅಪಹರಣ, ಪೊಸ್ಕೊ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Write A Comment