ಕುಂದಾಪುರ: ಖಾಸಗಿ ಬಸ್ಸುಗಳಲ್ಲಿ ವ್ಯಾಕ್ಯುಮ್ ಅಥವಾ ಕರ್ಕಶ ಹಾರ್ನ್ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಸಹನೆಯನ್ನು ಕೆಣಕುವ ಹಿನ್ನಲೆಯಲ್ಲಿ ಹಲವಾರು ದೂರುಗಳು ಪೊಲೀಸರಿಗೆ ಬಂದಿದ್ದು ಇಂತಹಾ ಹಾರ್ನ್ಗಳನ್ನು ತೆಗೆಯುವ ಕಾರ್ಯಾಚರಣೆಯನ್ನು ಕುಂದಾಪುರ ಸಂಚಾರಿ ಪೊಲೀಸರು ಕುಂದಾಪುರದಲ್ಲಿ ನಡೆಸಿದರು.
ಬಹುತೇಕ ಕುಂದಾಪುರ ನಗರ ಭಾಗದಲ್ಲಿ ಆಸ್ಪತ್ರೆ, ಕೋರ್ಟ್ , ಶಾಲಾ ವಠಾರ ಇತ್ಯಾದಿ ಪ್ರದೇಶದಲ್ಲಿ ಕರ್ಕಶ ಹಾರ್ನ್ಗಳಿಂದ ತೊಂದರೆಯಾಗುತ್ತಿದ್ದು ಈಗಾಗಲೇ ಹಲವು ದೂರುಗಳು ಸಂಚಾರಿ ಠಾಣೆಗೆ ಬಂದಿದ್ದು ಈ ಹಿನ್ನಲೆಯಲ್ಲಿ ಇಂತಹಾ ಹಾರ್ನ್ಗಳ ತೆರವು ಕಾರ್ಯಾಚರಣೆ ನಡೆಯಿತು. ಕುಂದಾಪುರ ಪಾರಿಜಾತ ಸರ್ಕಲ್ನಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಅನೇಕ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ಗಳನ್ನು ತೆಗೆದು ಹಾಕಿದರು.
ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರ ನಿರ್ದೇಶನದ ಮೇರೆಗೆ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಜಯ ಹಾಗೂ ದೇವೇಂದ್ರ ಅವರ ನೇತ್ರತ್ವದಲ್ಲಿ ಎ.ಎಎಸ್.ಐ. ಹಾಗೂ ಸಿಬ್ಬಂದಿಗಳು ಕರ್ಕಶ ಹಾರ್ನ್ಗಳನ್ನು ಬಸ್ಸುಗಳಿಂದ ತೆಗೆಯುವ ಹಾಗೂ ದಂಡ ಹಾಕುವ ಮೂಲಕ ಬಸ್ಸು ಚಾಲಕರಿಗೆ ಖಡಕ್ ವಾರ್ನ್ ನೀಡಿದರು.
ಇದೇ ವೇಳೆ ಐವತ್ತಕ್ಕೂ ಅಧಿಕ ಬಸ್ಸುಗಳಲ್ಲಿರುವ ಕರ್ಕಶ ಹಾರ್ನ್ಗಳನ್ನು ಬಸ್ಸು ಚಾಲಕರ ಕೈಯಿಂದಲೇ ತೆಗಿಸಿದ್ದಲ್ಲದೇ ದಂಡ ಹಾಕುವ ಕಾನೂನು ಕ್ರಮವನ್ನು ಕೈಗೊಳ್ಳಲಾಯಿತು.