ಮಂಗಳೂರು :ಐವರ ತಂಡವೊಂದು ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕಳವುಗೈದ ಘಟನೆ ಶನಿವಾರ ರಾತ್ರಿ ಬೋಂದೆಲ್ನ ಸರಕಾರಿ ವಸತಿ ನಿಲಯದಲ್ಲಿ ನಡೆದಿದೆ. ದರೋಡೆಗೊಳಗಾಗಿ ಹಲ್ಲೆಗೊಳಗಾದ ಮಹಿಳೆಯನ್ನು ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟಲ್ಲಿ ಸ್ಟೆನೋಗ್ರಾಫರ್ ವೃತ್ತಿಯಲ್ಲಿರುವ ರಾಧಾ (58) ಎಂದು ಹೆಸರಿಸಲಾಗಿದೆ.
ರಾತ್ರಿ 9 ಗಂಟೆಯ ವೇಳೆಗೆ ಐವರು ದುಷ್ಕರ್ಮಿಗಳು ರಾಧಾರ ಮನೆಗೆ ಬಂದು ತಮ್ಮ ಕಾರಿಗೆ ಅಪಘಾತವಾಗಿದೆ, ನೀರುಬೇಕೆಂದು ಕೇಳಿದ್ದಾರೆ. ಆದರೆ ರಾಧಾ ಅವರು ಬಾಗಿಲು ತೆರೆಯಲು ನಿರಾಕರಿಸಿ ಮನೆಯ ಹೊರಗಡೆ ಬಕೆಟ್ನಲ್ಲಿ ನೀರು ಇದೆ ಎಂದು ಹೇಳಿದ್ದಾರೆ. , ತೆಗೆದುಕೊಳ್ಳಿ ಎಂದು ತಿಳಿಸಿದರು. ಆದರೆ ತಮಗೆ ಕುಡಿಯಲು ನೀರು ಬೇಕಾಗಿರುವುದು ಎಂದು ಹೇಳಿದ ತಂಡವನ್ನು ನಂಬಿದ ರಾಧಾ ಒಳಗಿನಿಂದ ನೀರು ತಂದು, ಅದನ್ನು ಅವರಿಗೆ ನೀಡಲು ಸ್ವಲ್ಪವೇ ಬಾಗಿಲನ್ನು ತೆರೆದಾಗ ಆಕೆಯನ್ನು ಜೋರಾಗಿ ತಳ್ಳಿದ ಕಳ್ಳರು ನಂತರ ರಾಧಾ ಅವರ ಮೇಲೆ ಹಲ್ಲೆ ನಡೆಸಿ, ಕಟ್ಟಿ ಹಾಕಿ ದರೋಡೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿದ್ದು, ಮಾತ್ರವಲ್ಲದೇ ಕಳ್ಳರು ರಾತ್ರಿ ಇಡೀ ಅದೇ ಮನೆಯಲ್ಲಿ ಮಲಗಿ ಮುಂಜಾನೆ ಹೋಗುವಾಗ ಜೊತೆಗೆ ಒಂದು ಬಂಗಾರದ ಚೈನ್, ಉಂಗುರ ಮೂರು ಮೊಬೈಲ್ ಫೋನ್ಗಳು ಮತ್ತು ರೂ. 35,000 ನಗದು ದೋಚಿದ್ದಾರೆ. ಕಳ್ಳರು ತೆರಳಿದ ನಂತರ ರಾಧಾ ನಡೆದ ಘಟನೆಯನ್ನು ಮನೆಯ ಸಮೀಪವೇ ವಾಸವಿರುವ ಸಹೋದ್ಯೋಗಿ ತಿಮ್ಮಯ್ಯ ಅವರಲ್ಲಿ ತಿಳಿಸಿದ್ದು ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಧಾ ಅವರು ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.