ಮಂಗಳೂರು,ಜುಲೈ.01 : ಬೀಡಿ ಕಾರ್ಮಿಕರಿಗೆ 2015-16ನೇ ಸಾಲಿನಲ್ಲಿ ಸಾವಿರ ಬೀಡಿಗಳಿಗೆ 12.75 ರೂ. ತುಟ್ಟಿಭತ್ತೆಯನ್ನು ಬೀಡಿ ಮಾಲೀಕರು ಪಾವತಿಸಬೇಕಿತ್ತು. ಆದರೆ ಬೀಡಿ ಕಾರ್ಮಿಕರ ಈ ಮೊತ್ತವನ್ನು ನೀಡದಂತೆ ಬೀಡಿ ಮಾಲೀಕರಿಗೆ ರಾಜ್ಯ ಸರಕಾರ ಸಂಪೂರ್ಣ ವಿನಾಯಿತಿ ನಿಡಿದ್ದು, ಈ ವಿಷಯದಲ್ಲಿ ರಾಜ್ಯ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಎಐಟಿಯುಸಿ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಹಕ್ಕೋತ್ತಾಯ ಚಳುವಳಿಯನ್ನು ನಡೆಸಲಾಯಿತು.
ಅತ್ಯಂತ ಕಡಿಮೆ ಮಜೂರಿಯಲ್ಲಿ ದುಡಿಯುತ್ತಿರುವ ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸದ ರಾಜ್ಯ ಸರಕಾರ ಕೈಗಾರಿಕೆ ಕಷ್ಟದಲ್ಲಿದೆ ಎಂದು ಬೀಡಿ ಮಾಲೀಕರು ಹೇಳಿದ ತಕ್ಷಣ ಅವರಿಗೆ ಮಜೂರಿ ಪಾವತಿಯಲ್ಲಿ ಸಂಪೂರ್ಣ ವಿನಾಯಿತಿ ನೀಡಿರುವುದು ಸರಕಾರದ ದಡ್ಡತನದ ಎಂದು ಪ್ರತಿಭಟನಾಕಾರರು ದೂರಿ, ನ್ಯಾಯ ಒದಗಿಸಲು ಆಗ್ರಹಿಸಿದರು.
ಎಸ್ಕೆ ಬೀಡಿ ವರ್ಕರ್ಸ್ ಫೆಡರೇಶನ್ನ ಅಧ್ಯಕ್ಷ ಪಿ.ಸಂಜೀವ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್ ಮುಖ್ಯ ಭಾಷಣ ಮಾಡಿದರು.
ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ ಕೋಶಾಧಿಕಾರಿ ಕೆ.ವಿ.ಭಟ್, ಬಂಟ್ವಾಳ ತಾಲೂಕು ಬೀಡಿ ಮತ್ತು ಜನರಲ್ ಲೇಬರ್ ಯೂನಿಯನ್ ಅಧ್ಯಕ್ಷ ಬಾಬು ಭಂಡಾರಿ, ಪುತ್ತೂರು ತಾಲೂಕು ಬೀಡಿ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ಕಾರ್ಯದರ್ಶಿ ಪಿ.ರಾಮಣ್ಣ ರೈ, ಸುಲೋಚನಾ ಕವತ್ತಾರು, ಸರಸ್ವತಿ ಕೆ., ಶಶಿಕಲಾ ಉಡುಪಿ, ಕೆ.ಈಶ್ವರ್, ಎಂ.ಶಿವಪ್ಪ ಕೋಟ್ಯಾನ್, ಚಿತ್ರಾಕ್ಷಿ, ತಿಮ್ಮಪ್ಪ ನೇತೃತ್ವ ವಹಿಸಿದ್ದರು.
ಎಸ್ಕೆ ಬೀಡಿ ವರ್ಕರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ವಿ.ಎಸ್ ಬೇರಿಂಜ ಸ್ವಾಗತಿಸಿದರು. ಬೀಡಿ ಆ್ಯಂಡ್ ಟೊಬ್ಯಾಕೊ ಲೇಬರ್ ಯೂನಿಯನ್ ಕೋಶಾಧಿಕಾರಿ ಎಂ,ಕರುಣಾಕರ್ ವಂದಿಸಿದರು. ಬೀಡಿ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ಪಾಣೆಮಂಗಳೂರು ಫಿರ್ಕಾ ಕಾರ್ಯದರ್ಶಿ ಸುರೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.