ಕುಂದಾಪುರ: ಎತ್ತ ನೋಡಿದರೂ ಮುರಿದು ಬಿದ್ದ ವಿದ್ಯುತ್ ಕಂಬಗಳು, ಕಂಬದಿಂದ ಜೋತಾಡುತ್ತಿರುವ ವಿದ್ಯುತ್ ತಂತಿಗಳು.. ಗದ್ದೆಯಲ್ಲಿ ನಿಂತ ಸಮುದ್ರದ ನೀರಿನಿಂದಾಗಿ ಮೆಸ್ಕಾಂ ಇಲಾಖೆಯವರೂ ಕೆಲಸ ಮಾಡಲು ಆಗದ ಪರಿಸ್ಥಿತಿ.. ಈ ಭಾಗದ ಜನರು ಕತ್ತಲಲ್ಲಿ ಬದುಕಬೇಕಾದ ಪರಿಸ್ಥಿತಿ.. ಹೌದು ಇದು ಬೀಜಾಡಿ-ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನದ ಹಿಂಭಾಗದ ಜನರು ವಾರಗಳಿಂದ ಪರಿಪಾಡಲು ಪಡುತ್ತಿರುವ ಪರಿಯಿದು.
ಚಿಕ್ಕಮ್ಮ ದೇವಸ್ಥಾನದ ಹಿಂಭಾಗದ ರಸ್ತೆಯಿಂದ ಸಮುದ್ರ ತೀರಕ್ಕೆ ದಾರಿ ಸಂಪರ್ಕಿಸುವ ರಸ್ತೆಯಲ್ಲಿ ಒಂದಷ್ಟು ಮನೆಗಳಿವೆ. ಶುಕ್ರವಾರ ಬೀಸಿದ ಬಾರೀ ಗಾಳಿಗೆ ಈ ಭಾಗದ ಹಲವು ವಿದ್ಯುತ್ ಕಂಬಗಳು ಧರೆಗುರುಳಿದೆ. ಐದು ದಿನಗಳೇ ಕಳೆದರೂ ಈವರೆಗೂ ಇಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಬಂದಿಲ್ಲ. ಕಾರಣ ಏನಂದ್ರೇ ವಿದ್ಯುತ್ ಕಂಬ ನೆಲದಲ್ಲಿ ಹುಗಿಯಲು ಗದ್ದೆಯಲ್ಲಿರುವ ನೀರು ಕಾಲಿಯಾಗಬೇಕಿದೆ. ಆದರೇ ಮಳೆಯ ನೀರು ಹಾಗೂ ಸಮುದ್ರದಿಂದ ಉಕ್ಕಿ ಬರುವ ನೀರು ಗದ್ದೆಯಲ್ಲಿ ಒಂದು ಅಡಿಯೆತ್ತರಕ್ಕೆ ನಿಂತಿದೆ. ಇದರಿಂದಾಗಿ ವಿದ್ಯುತ್ ದುರಸ್ಥಿಗೆ ತೊಡಕಾಗುತ್ತಿದೆ.
ಕತ್ತಲಲ್ಲಿ ಈ ಭಾಗದ ಜನರು: ಈ ಭಾಗದಲ್ಲಿ ಸುಮಾರು ೩೦-೩೫ ಮನೆಗಳಿದ್ದು ಹಲವು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುವವರಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಅವ್ಯವಸ್ಥೆ ಹಿನ್ನೆಲೆ ಈ ಭಾಗದ ಜನರು ಪರದಾಡುವಂತಾಗಿದೆ. ಅಲ್ಲದೇ ಇದೇ ಪರಿಸರದಲ್ಲಿ ಎರಡು ತಿಂಗಳ ಹಿಂದಷ್ಟೇ ಗರ್ಬಿಣಿ ಮಹಿಳೆಯೋರ್ವರ ಕೊಲೆಯೊಂದು ನಡೆದಿತ್ತು. ಈ ಬಳಿಕ ಇಲ್ಲಿನ ಜನರು ಕತ್ತಲೆಂದರೇ ಮನೆ ಸೇರುತ್ತಿದ್ದರು. ಆದರೇ ಈಗ ವಿದ್ಯುತ್ ಸಮಸ್ಯೆಯಿಂದ ಇಲ್ಲಿನವರ ಭಯ ಇನ್ನಷ್ಟು ಜಾಸ್ಥಿಯಾಗಿದೆ.
ನೀರು ಖಾಲಿ ಮಾಡಿಕೊಡಿ, ವಿದ್ಯುತ್ ರಿಪೇರಿ ಮಾಡ್ತೇವೆ: ವಿದ್ಯುತ್ ಕಂಬಗಳನ್ನು ಪುನಃ ಅಳವಡಿಸಿ ಸಂಪರ್ಕ ಸರಿಪಡಿಸಬೇಕಾದರೇ ಇಲ್ಲಿನ ಗದ್ದೆಗಳ ನೀರು ಒಣಗಲೇಬೇಕು, ನೀರು ಖಾಲಿ ಮಾಡಿದರೇ ಶೀಘ್ರವಾಗಿ ವಿದ್ಯುತ್ ಸಂಪರ್ಕವನ್ನು ದುರಸ್ಥಿ ಮಾಡುತ್ತೇವೆ ಎಂದು ಮೆಸ್ಕಾಂ ಇಲಾಖೆ ಹೇಳಿದ್ದು ಸ್ಥಳೀಯರು ನೀರು ಹರಿದು ಹೋಗಲು ಸಮುದ್ರದ ಬಳಿ ತೋಡು ನಿರ್ಮಿಸಿದ್ದಾರೆ. ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆಯೆಂಬ ಕಾರಣಕ್ಕೆ ಮಹಿಳೆಯರೇ ಹಾರೆಗಳನ್ನು ಹಿಡಿದು ಗದ್ದೆಯ ನೀರನ್ನು ಸಮುದ್ರಕ್ಕೆ ಹರಿಸಲು ಹರಸಾಹಸ ಪಡುತ್ತಿದ್ದಾರೆ.
ಕೆಲಸ ಮಾಡಲು ತೊಡಕಾಗುತ್ತಿದೆ: ಈಗಾಗಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದ್ದೆಯಲ್ಲಿ ನೀರು ಕಡಿಮೆಯಾಗಡೇ ಕೆಲಸ ಮಾಡುವುದು ಕಷ್ಟವೆಂದು ನುರಿತ ಕೆಲಸಗಾರರು ತಿಳಿಸಿದ್ದಾರೆ ಆದ್ದರಿಂದ ನಾವೂ ಕೂಡ ಅಸಹಾಯಕರಾಗಿದ್ದೇವೆ. ಸ್ಥಳದಲ್ಲಿ ಮುರಿದು ಬಿದ್ದ ಕಂಬಗಳನ್ನು ಬದಲಿಗೊಳಿಸಲು ಹೊಸ ಕಂಬಗಳನ್ನು ಈಗಾಗಲೇ ಅಲ್ಲಿ ಕೊಂಡೊಯ್ದು ಇಟ್ಟಿದ್ದೇವೆ ಎಂದು ಗೋಪಾಡಿ ಮೆಸ್ಕಾಂ ಶಾಖೆಯ ಬಾಬಣ್ಣ ಪೂಜಾರಿ ಹೇಳುತ್ತಾರೆ.
ಕೃಷಿಯೂ ಹಾಳು: ಸಮೀಪದಲ್ಲಿ ಹಲವು ಗದ್ದೆಗಳಿದ್ದು ಇಲ್ಲಿ ಈ ಸಮಯದಲ್ಲಿ ಭತ್ತದ ಕ್ರಷಿಯನ್ನು ಮಾಡಲಾಗುತ್ತಿತ್ತು. ಆದರೇ ಈ ವರ್ಷ ಸಮುದ್ರದ ನೀರು ಕ್ರಷಿಭೂಮಿಗೆ ನುಗ್ಗಿದ ಕಾರಣ ಗದ್ದೆಯಲ್ಲಿ ಬೆಳೆದ ಭತ್ತದ ಸಸಿಗಳು ಸಂಪೂರ್ಣ ನಾಶವಾಗಿದೆ.
ಜನಪ್ರತಿನಿಧಿಗಳು ಸ್ಪಂಧಿಸಲಿ: ಘಟನೆ ನಡೆದು ನಾಲ್ಕೈದು ದಿನಗಳೇ ಕಳೆದರೂ ಕೂಡ ಯಾವೊಬ್ಬ ಜನಪ್ರತಿನಿಧಿಯೂ ಇಲ್ಲಿಗೆ ಆಗಮಿಸಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಆಶ್ವಾಸನೆಯನ್ನು ನೀಡಿ ಹೋಗುವ ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ನಿತ್ಯ ಸಂಕಷ್ಟದಲ್ಲಿಯೇ ಬದುಕುವ ಅತಂತ್ರ ಸ್ಥಿತಿ ನಮ್ಮದು ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಒಟ್ಟಿನಲ್ಲಿ ಇಲ್ಲಿನ ಜನರು ಮಾತ್ರ ಕತ್ತಲಲ್ಲಿ ಬದುಕಬೇಕಾದ ಅನಿವಾರ್ಯತೆಯಿದೆ, ಶೀಘ್ರವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದ ವ್ಯವಸ್ಥೆ ಸಂಬಂದಪಟ್ಟ ಇಲಾಖೆಯದ್ದಾಗಿದೆ.
ವರದಿ- ಯೋಗೀಶ್ ಕುಂಭಾಸಿ