ಮಂಗಳೂರು : ಕಾಂಗ್ರೆಸ್ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯವನ್ನು ಖಂಡಿಸಿ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಮನಪಾ ಮುಂದೆ ಪ್ರತಿಭಟನೆ ನಡೆಯಿತು.ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಾಂಸ್ಕೃತಿಕ ಕಲಾವೇದಿಕೆಯಾದ ಪುರಭವನದ ಕಾಮಗಾರಿಯನ್ನು 10 ತಿಂಗಳಾದರೂ ಪೂರೈಸದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ‘ನಗರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತಿವೆ. ಕಲಾವಿದರಿಗೆ ಅವಶ್ಯವಾಗಿರುವ ಪುರಭವನ ಕಾಮಗಾರಿಯಲ್ಲಿ ವಿಳಂಬ ವಾಗುತ್ತಿದೆ. ಅನಗತ್ಯ ರಾಜಕೀಯ, ಭ್ರಷ್ಟಾಚಾರದಿಂದಾಗಿ ಪುರಭವನದಿಂದ ಪಾಲಿಕೆಗೆ ಬರಬೇಕಾದ ವರಮಾನಕ್ಕೂ ಕಾಂಗ್ರೆಸ್ ಕಲ್ಲುಹಾಕಿದೆ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗರ ಈ ಧೋರಣೆ ಖಂಡನೀಯ’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ ಮಾತನಾಡಿ,ರಾಜಕೀಯ ಲಾಬಿ ನಡೆಸಿ, ಕ್ಷುಲ್ಲಕ ನೆಪವೊಡ್ಡಿ ಆಯುಕ್ತರನ್ನು ವರ್ಗಾವಣೆ ಮಾಡುವುದನ್ನೇ ಆಡಳಿತವೆಂದುಕೊಂಡಿರುವ ಕಾಂಗ್ರೆಸ್ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವರ್ಗಾವಣೆಗೊಂಡ ಆಯುಕ್ತೆಯನ್ನು ವಾಪಸ್ ಕರೆತರಬೇಕು. ಇಲ್ಲದಿದ್ದಲ್ಲಿ ಶೀಘ್ರ ಹೊಸ ಆಯುಕ್ತರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಯೋಗೀಶ್ ಭಟ್, ಮನಪಾ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿದರು. ಮನಪಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ರಜನಿ ದುಗ್ಗಣ್ಣ, ಬಿಜೆಪಿ ದಕ್ಷಿಣ ಅಧ್ಯಕ್ಷ ರವಿಶಂಕರ್ ಮಿಜಾರ್, ನಾಯಕ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.



