ಬೆಳ್ತಂಗಡಿ / ಧರ್ಮಸ್ಥಳ ಜೂ.22: ನಿತ್ಯವೂ ನಿಯಮಿತವಾಗಿ ಯೋಗ ಮಾಡುವುದರಿಂದ ಆರೋಗ್ಯ ರಕ್ಷಣೆ ಯೊಂದಿಗೆ ನಮ್ಮ ಕಾರ್ಯದಕ್ಷತೆ ಹೆಚ್ಚಾಗುತ್ತದೆ. ಶಕ್ತಿಯ ವರ್ಧನೆಯೊಂದಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ರವಿವಾರ ಧರ್ಮಸ್ಥಳದಲ್ಲಿ ಅಮೃತ ವರ್ಷಿಣಿ ಸಭಾ ಭವನದಲ್ಲಿ ವಿಶ್ವಯೋಗ ದಿನಾ ಚರಣೆ ಅಂಗವಾಗಿ ಆಯೋಜಿಸಲಾದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಶುಭಾಶಂಸನೆ ಮಾಡಿ ಅವರು ಮಾತನಾಡಿದರು.
ಯೋಗಾಭ್ಯಾಸವು ತಾಯಿಯ ಗಭರ್ದಿಂದಲೇ ಗರ್ಭಾಸನದೊಂದಿಗೆ ಪ್ರಾರಂಭವಾಗುತ್ತದೆ ಎಂದು ಹೇಳಿದ ಅವರು, ಯುವಜನತೆ ಯೋಗದ ಸದುಪಯೋಗ ಪಡೆಯಬೇಕು. ಸಶಕ್ತವಾದ ಯುವ ಸಮುದಾಯದಿಂದ ದೇಶ ಸಶಕ್ತವಾಗುತ್ತದೆ ಎಂದರು. ರಾಷ್ಟ್ರದ ಪ್ರಗತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ನೀಡುತ್ತಿರುವ ಕೊಡುಗೆಯೂ ಅಮೂಲ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯವರೊಂದಿಗೆ ಸಮಾ ಲೋಚನೆ ನಡೆಸಿ ಶಿಕ್ಷಣ ಇಲಾಖೆ ಮತ್ತು ಕ್ರೀಡಾ ಇಲಾಖೆಯ ಜಂಟಿ ಸಹಯೋಗದೊಂದಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗವನ್ನು ಶಾಲಾ ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಉಪ ಸಭಾಪತಿ ಪುಟ್ಟಣ್ಣ, ರಾಜೀವ್ಗಾಂಧಿ ಆರೋಗ್ಯ ವಿ.ವಿ.ಯ ಕುಲಪತಿ ಡಾ.ಎಸ್. ಸಚ್ಚಿದಾನಂದ, ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯಸ್ಥ ಅರುಣ್ ಪುಜಾರ್ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು.
ಬ್ಲಾಸಂ ಫೆರ್ನಾಂಡಿಸ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶಾಂತಿವನ ಟ್ರಸ್ಟ್ನ ಯೋಗ ನಿರ್ದೇಶಕ ಐ.ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.
ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು.
400 ಮಂದಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಉಜಿರೆಯಲ್ಲಿ ಎನ್ಸಿಸಿ ಕೆಡೆಟ್ಗಳಿಂದ ಯೋಗ ಪ್ರದರ್ಶನ: ಉಜಿರೆಯಲ್ಲಿ ಎಸ್ಡಿಎಂ ಪ್ರಕೃತಿ ಚಿಕಿತಾ್ಸ ಮತ್ತು ಯೋಗ ವಿಜ್ಞ್ಞಾನ ಕಾಲೇಜಿನಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಶಾಲಾ-ಕಾಲೇಜುಗಳ 800 ಎನ್ಸಿಸಿ ಕೆಡೆಟ್ಗಳು ಯೋಗ ಪ್ರದರ್ಶನ ನೀಡಿದರು. ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಯಶೋವರ್ಮ ಶುಭ ಹಾರೈಸಿದರು.