ಮಂಗಳೂರು, ಜೂ.22: ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ವಿ.ಗೋಪಾಲ ಗೌಡ ರವಿವಾರ ನಗರದ ಕೊಡಿಯಾಲ್ಬೈಲ್ನಲ್ಲಿರುವ ದ.ಕ. ಜಿಲ್ಲಾ ಕಾರಾಗೃಹ ಹಾಗೂ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಕಾರಾಗೃಹಕ್ಕೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಖೈದಿಯೊಬ್ಬರು ಆರೋಗ್ಯ ಸಮಸ್ಯೆ ತಿಳಿಸಿದಾಗ, ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದರು. ಇಬ್ಬರು ಮಹಿಳಾ ಖೈದಿಗಳ ಎರಡು ಪುಟಾಣಿ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಶಾಲೆ ಸೇರಿಸಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಕಾರಾಗೃಹದೊಳಗಿನ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಸಲಹೆ ಸೂಚನೆಗಳನ್ನು ನೀಡಿದರು.
ಬಳಿಕ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶರು ಆಸ್ಪತ್ರೆಯಲ್ಲಿ ಕೈಗೊಳ್ಳಲಾಗಿರುವ ನೂತನ ಯೋಜನೆ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಬಗ್ಗೆ ಮಾಹಿತಿ ನೀಡಿದ ವೆನ್ಲಾಕ್ ಜಿಲ್ಲಾ ಸರ್ಜನ್ ಡಾ| ರಾಜೇಶ್ವರಿ ದೇವಿ ಅವರು, ಶೀಘ್ರದಲ್ಲೇ 15 ಕೋಟಿ ರೂ. ವೆಚ್ಚದ ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಉಮಾ ಎಂ.ಜಿ., ಕಾನೂನು ಸೇವೆಗಳ ಪ್ರಾಧಿಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಗಣೇಶ್, ನ್ಯಾಯಾಧೀಶರಾದ ಎನ್.ಎಸ್. ಪಾಟೀಲ್, ಸಿ.ಎಂ. ಜೋಶಿ, ಕಾರಾಗೃಹ ಅಧೀಕ್ಷಕ ಓಬಳೇಶ್ವರಪ್ಪ, ಜೈಲರ್ ಸಿದ್ಧಪ್ಪ ಒಡೆಯರ್ ಮುಂತಾದವರು ಹಾಜರಿದ್ದರು.