ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಬುಧವಾರ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಜರಗಿತು, ವಿ.ವಿ. ಕುಲಾಧಿಪತಿಗಳಾಗಿರುವ ಕರ್ನಾಟಕ ರಾಜ್ಯಪಾಲ ವಜೂಭಾಯಿ ರುಡಾಭಾಯಿ ವಾಲಾ ಅವರು ಅಧ್ಯಕ್ಷತೆ ವಹಿಸಿದ್ದರು.
ಘಟಿಕೋತ್ಸವದಲ್ಲಿ ಪ್ರಸಿದ್ಧ ವಿಜ್ಞಾನಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಹಾಗೂ ಹೈದರಾಬಾದ್ ವಿಶ್ವದ್ಯಾನಿಲಯದ ಸ್ಕೂಲ್ ಆಫ್ ಕೆಮೆಸ್ಟ್ರಿಯ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕ ಪ್ರೊ| ಗೋವರ್ಧನ ಮೆಹ್ತಾ, ಮುಂಬಯಿಯ ಆಲ್ಕಾರ್ಗೋ ಲಾಜಿಸ್ಟಿಕ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಕೈಗಾರಿಕೋದ್ಯಮಿ ಶಶಿ ಕಿರಣ್ ಶೆಟ್ಟಿ ಹಾಗೂ ಎನ್ಯುಎಸ್ ಇಂಡಿಯಾ ರಿಸರ್ಚ್ ಇನಿಶಿಯೇಟಿವ್ ನ್ಯಾಶನಲ್ ಯುನಿವರ್ಸಿಟಿ ಆಫ್ ಸಿಂಗಾಪುರ ಇಲ್ಲನ ಶಿಕ್ಷಣ ತಜ್ಞ ಪ್ರೊ| ಬಿ.ವಿ.ಆರ್. ಚೌಧರಿ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಪೂರ್ವಾಹ್ನದ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸಾಂಕೇತಿಕವಾಗಿ ಪದವಿ ಪ್ರದಾನ ಮಾಡಿದರು, ಅಪರಾಹ್ನ 3.30ರಿಂದ ನಡೆದ ಸಮಾರಂಭದಲ್ಲಿ ಎಲ್ಲರಿಗೂ ಪದವಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ| ಗೋವರ್ಧನ ಮೆಹ್ತಾ ಅವರು ಘಟಿಕೋತ್ಸವ ಭಾಷಣ ಮಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಕೆ. ಭೈರಪ್ಪ, ಕುಲಸಚಿವ ಪಿ.ಎಸ್. ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ಬಿ. ನಾರಾಯಣ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ| ಜಿ.ಪಿ. ಶಿವರಾಮ ಮುಂತಾದವರು ಉಪಸ್ಥಿತರಿದ್ದರು.
88 ಮಂದಿಗೆ ಡಾಕ್ಟರೇಟ್ ಪದವಿ :
ಇಂದಿನ ಘಟಿಕೋತ್ಸವದಲ್ಲಿ 88 ಮಂದಿಗೆ ಡಾಕ್ಟರೇಟ್ ಪದವಿ (ಕಲೆ 11, ವಿಜ್ಞಾನ 63, ವಾಣಿಜ್ಯ 9, ಶಿಕ್ಷಣ 5)37 ಮಂದಿಗೆ ಚಿನ್ನದ ಪದಕ ಮತ್ತು 63 ಮಂದಿಗೆ ನಗದು ಬಹುಮಾನ ನೀಡಲಾಯಿತು. ಒಟ್ಟು 57 ಮಂದಿಗೆ ರ್ಯಾಂಕ್(ಸ್ನಾತಕೋತ್ತರ ಪದವಿ 40 ಮತ್ತು ಪದವಿ 17, ಕಲೆ 14, ವಿಜ್ಞಾನ ಮತ್ತು ತಂತ್ರಜ್ಞಾನ 30, ವಾಣಿಜ್ಯ 9, ಶಿಕ್ಷಣ 3, ಸ್ನಾತಕೋತ್ತರ ಡಿಪ್ಲೊಮಾ 1)ನೀಡಲಾಯಿತು.
ಸ್ನಾತಕೋತ್ತರ ಡಿಪ್ಲೊಮಾ : ಇಬ್ಬರಲ್ಲಿ ಇಬ್ಬರೂ ಶೇ.ನೂರು ಉತ್ತೀರ್ಣ
ವಿಶ್ವವಿದ್ಯಾನಿಲಯದ 2013-14ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 34,627 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 23,385(ಶೇ.67.53)ಮಂದಿ ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಪದವಿ ಪರೀಕ್ಷೆಗೆ 4,829 ಮಂದಿ ಹಾಜರಾಗಿ, 4,579 ಮಂದಿ(ಶೇ.94.82)ಪಾಸಾಗಿದ್ದಾರೆ. ಪದವೀ ಪರೀಕ್ಷೆಗೆ 29,708 ಮಂದಿ ಹಾಜರಾಗಿದ್ದು, 18,716(ಶೇ.63) ಮಂದಿ ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಇಬ್ಬರಲ್ಲಿ ಇಬ್ಬರೂ ಶೇ.ನೂರು ಉತ್ತೀರ್ಣಗೊಂಡಿದ್ದಾರೆ.
ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 4,579ರಲ್ಲಿ 1,610 (ಶೇ.35.16) ಹುಡುಗರು ಮತ್ತು 2,969(ಶೇ.64.84)ಹುಡುಗಿಯರು. ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 18,716ರಲ್ಲಿ 6,497 (ಶೇ.34.71) ಹುಡುಗರು ಮತ್ತು 12,219 (ಶೇ.65.29)ಹುಡುಗಿಯರು. ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಉತ್ತೀರ್ಣರಾದವರು ಇಬ್ಬರೂ ಹುಡುಗಿಯರು ಎಂದು ಕುಲಪತಿ ಪ್ರೊ| ಕೆ. ಭೈರಪ್ಪ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಪರೀಕ್ಷೆಯಲ್ಲಿ ತೇರ್ಗಡೆಯಾದವರಲ್ಲಿ 23,297(ಪಿಎಚ್ಡಿ ಹೊರತುಪಡಿಸಿ)ವಿದ್ಯಾರ್ಥಿಗಳಲ್ಲಿ 7,932(ಶೇ.34.05)ಉನ್ನತ ಶ್ರೇಣಿ, 9,118(ಶೇ.39.14) ಪ್ರಥಮ ಶ್ರೇಣಿ, 5,402(ಶೇ.23.19)ದ್ವಿತೀಯ ಹಾಗೂ 845(ಶೇ.3.62)ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ 23,385 ಮಂದಿಯಲ್ಲಿ 1,315(ಶೇ.5.62)ಡಾಕ್ಟರೇಟ್ ಪದವಿ 88, ಸ್ನಾತಕೋತ್ತರ ಪದವಿ 304, ಪದವಿ 923)ವಿದಾರ್ಥಿಗಳು ತಮ್ಮ ಪದವಿಯನ್ನು ಸ್ವಯಂ ಪಡೆಯುತ್ತಿದ್ದಾರೆ ಎಂದು ಕುಲಪತಿಗಳು ಹೇಳಿದರು.