ಸುಳ್ಯ,ಜೂನ್.16 : ಪಂಜ ಸಮೀಪದ ಅರಣ್ಯ ಇಲಾಖೆಯ ವ್ಯಾಪ್ತಿಯ ಪಾಂಡಿಗದ್ದೆ ಎಂಬಲ್ಲಿ ಸರಕಾರಿ ಜಾಗದಿಂದ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು ಲಾರಿಯಲ್ಲಿದ್ದ ಐವರನ್ನು ಪಂಜ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಪಡ್ಪಿನಂಗಡಿ ಸಮೀಪದ ಮುಚ್ಚಿಲ ನಿವಾಸಿ ರಮ್ಲ ತಪ್ಪಿಸಿಕೊಂಡಿದ್ದಾನೆ. ಪುತ್ತೂರು ತಾಲೂಕಿನ ಮುಡ್ನೂರು ಗ್ರಾಮದ ನೆಟ್ಟಣಿಕೆ ನಿವಾಸಿಗಳಾದ ಕೆ.ಅಬ್ಬಾಸ್, ಎಂ.ರಫೀಕ್, ಹಸೈನಾರ್, ವಿಶ್ವನಾಥ್, ಕೃಷ್ಣಪ್ಪ ಎಂಬವರನ್ನು ಬಂದಿಸಲಾಗಿದೆ. ಕಿರಾಲುಬೋಗಿಮರದ ಒಟ್ಟು 19ದಿಮ್ಮಿ ವಶಪಡಿಸಿಕೊಂಡಿದ್ದಾರೆ. ಲಾರಿ ಸೇರಿ ಸುಮಾರು ಐದು ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಂತ್ತಾಗಿದೆ.
ಕಾರ್ಯಾಚರಣೆಯಲ್ಲಿ ಪಂಜ ವಲಯಾರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ, ಉಪವಲಯಾರಣ್ಯಾಧಿಕಾರಿ ರಾಜೇಶ್, ಅರಣ್ಯ ರಕ್ಷಕರಾದ ಹನುಮಂತರಾಜು, ಸಂತೋಷ್, ದಿವೀಶ್, ಮಂಜುನಾಥ್, ಜಯಪ್ರಕಾಶ್, ಅರಣ್ಯ ವೀಕ್ಷಕರಾದ ಜನಾರ್ಧನ,ಗಣೇಶ್ ಹೆಗ್ಡೆ ಪಾಲ್ಗೊಂಡಿದ್ದರು. ಪಾಂಡಿಗದ್ದೆಯ ಸರಕಾರಿ ಜಮೀನಿನಿಂದ ಮರ ಸಾಗಾಟ ಮಾಡುತ್ತಿದ್ದಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿಗಳು ಮುಂದಿನ ತನಿಖೆ ನಡೆಸುತ್ತಿದ್ದಾರೆ.