ಪುತ್ತೂರು, ಜೂನ್.15: ರಾಜ್ಯ ಹೆದ್ದಾರಿಯ ಅರಿಯಡ್ಕ ಗ್ರಾಮದಲ್ಲಿ ನಿನ್ನೆ ಕಾರೊಂದು ಇತರ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಬೆಂಗಳೂರು ಮೂಲದ ಇಬ್ಬರು ಮೃತಪಟ್ಟಿದ್ದು, ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾದ ಸೂರ್ಯನಾರಾಯಣ (64) ಮತ್ತು ಗೋಪಿನಾಥ (45) ಎಂದು ಹೆಸರಿಸಲಾಗಿದೆ. ಅದೇ ಕಾರಿನಲ್ಲಿದ್ದ ವಿಠಲ ಮತ್ತು ಕಾರ್ತಿಕ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಪುತ್ತೂರು ಹೊರವಲಯದ ಬನ್ನೂರು ನಿವಾಸಿ ವೆಂಕಟ್ರಮಣ ರಾವ್ ಎನ್ನುವವರು ನಿಧನರಾಗಿದ್ದು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೆಂದು ಸೂರ್ಯನಾರಾಯಣ ಮತ್ತು ಇತರರು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನಿಂದ ಆಗಮಿಸುತ್ತಿದ್ದಾಗ ಅರಿಯಡ್ಕ ಗ್ರಾಮದ ಕೌಡಿಚ್ಚಾರು ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿ ಚರಂಡಿಗಾಗಿ ಅಗೆಯಲಾದ ಮಣ್ಣು ರಸ್ತೆಯಲ್ಲಿ ಹರಡಿಕೊಂಡಿದ್ದು, ಮಳೆಯಿಂದಾಗಿ ಕೆಸರು ಇಡೀ ರಸ್ತೆಯನ್ನು ಅಕ್ರಮಿಸಿಕೊಂಡಿದೆ. ಇದರ ಅರಿವಿಲ್ಲದೇ ವೇಗವಾಗಿ ಬಂದ ಕಾರು ಸ್ಕಿಡ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ತೀರಾ ಬಲಭಾಗಕ್ಕೆ ಚಲಿಸಿ ಎದುರಿನಿಂದ ಬರುತ್ತಿದ್ದ ಹುಂಡೈ ಐ-20 ಮತ್ತು ಫುಂಟೊ ಕಾರುಗಳಿಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಪಕ್ಕದ ದಿಣ್ಣೆಯನ್ನು ಹತ್ತಿದೆ.
ಅಪಘಾತದಲ್ಲಿ ಕಾರು ನುಜ್ಜುಗುಜ್ಜಾಗಿದ್ದು ತೀವ್ರವಾಗಿ ಗಾಯಗೊಂಡಿದ್ದ ಸೂರ್ಯನಾರಾಯಣ ಮತ್ತು ಗೋಪಿನಾಥ್ ಪುತ್ತೂರಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದಾರೆ. ಹುಂಡೈ ಮತ್ತು ಫುಂಟೊ ಕಾರುಗಳಲ್ಲಿದ್ದವರಿಗೆ ಯಾವುದೇ ಅಪಾಯಗಳಾಗಿಲ್ಲ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.