ಉಳ್ಳಾಲ.ಜೂನ್.08: ಯುವಸಮುದಾಯ ಜತೆಯಾಗಿ ಸೇರಿಕೊಂಡು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಡೈಮಂಡ್ ಸ್ಪೋಟ್ಸ್ ಕ್ಲಬ್ ಇದರ ವತಿಯಿಂದ ಉಳ್ಳಾಲದ ತಾಜ್ಮಹಲ್ನಲ್ಲಿ ಭಾನುವಾರ ನಡೆದ ಉಚಿತ ಪುಸ್ತಕ ವಿತರಣೆ ಸಮಾರಂಭದಲ್ಲಿ ಪುಸ್ತಕ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ಥಾನಗಳನ್ನು ಗಳಿಸಲು ಡೈಮಂಡ್ ಸ್ಪೋಟ್ಸ್ ಕ್ಲಬ್ ಪ್ರೇರಣೆ ಶಕ್ತಿಯಾಗಲಿದೆ. ಯುವ ಸಮುದಾಯವೇ ಇರುವ ಡೈಮಂಡ್ ಕ್ಲಬ್ ಇನ್ನಷ್ಟು ಸಮಾಜಮುಖಿ ಸಾಧನೆಗಳೊಂದಿಗೆ ಇತರೆ ಸಂಘಟನೆಗಳಿಗೆ ಮಾದರಿಯಾಗಲಿ ಎಂದರು.
ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಮುಕ್ಕಚ್ಚೇರಿ, ನಗರಸಭೆ ಸದಸ್ಯ ಪೊಡಿಮೋನು, ಉಳ್ಳಾಲದ ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷ ಯು.ಬಿ.ಮಾರಪ್ಪ,ಉಳ್ಳಾಲದ ಜೆಡಿಎಸ್ ನಾಯಕ ಜೆ.ಮುಹಮ್ಮದ್, ಡೈಮಂಡ್ ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಯು.ಎಂ.ನೌಶಾದ್ ಹುಸೈನ್, ಉಪಾಧ್ಯಕ್ಷ ಖಲೀಲ್, ಸರ್ಫರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಬ್ದುಲ್ ರಝಾಕ್ ಶರ್ಮದ್ ಸ್ವಾಗತಿಸಿ ನಿರ್ವಹಿಸಿದರು.