ಮಂಗಳೂರು,ಜೂನ್.06: ತಳಮಟ್ಟದ ಜನ ಸಂಪರ್ಕವಿದ್ದಲ್ಲಿ ಮಾತ್ರವೇ ಯಾವೂದೇ ಒಬ್ಬ ವ್ಯಕ್ತಿ ನಂಬರ್ ಒನ್ ಪಟ್ಟಕ್ಕೆ ಏರಲು ಸಾಧ್ಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಹೇಳಿದರು. ಅವರು ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಾಜ್ಯದ ನಂಬರ್ ಒನ್ ಸಂಸದ ಎಂಬ ಬಿರುದಿಗೆ ಪಾತ್ರರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ನೆಲೆಯಲ್ಲಿಯೇ ಕಾರ್ಯಕರ್ತನಿಗೂ ಉನ್ನತ ಹುದ್ದೆಯ ಅವಕಾಶ ದೊರಕಿದೆ. ಇದಕ್ಕೆ ಸಾಕ್ಷಿಯಾಗಿ ಓರ್ವ ಸಾಮಾನ್ಯ ಕಾರ್ಯಕರ್ತ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಪ್ರಧಾನ ಮಂತ್ರಿಯವರೆಗೂ ಸಾಧನೆ ಮಾಡಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಜನರ ಹೃದಯದಲ್ಲಿ ನೆಲೆಸಿರುವವನೇ ನಿಜವಾದ ಕಾರ್ಯಕರ್ತ, ನಾಯಕ ಎಂದು ಭಾನುಪ್ರಕಾಶ್ ಹೇಳಿದರು.
ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಎದುರು ನಳಿನ್ ಕುಮಾರ್ ಸ್ಪರ್ಧಿಸುವಾಗ ಹುಡುಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದು ಅವಹೇಳನ ಮಾಡಲಾಗಿತ್ತು. ಆದರೆ ಎರಡನೆ ಬಾರಿಯೂ ಪೂಜಾರಿ ವಿರುದ್ಧ ನಳಿನ್ ಗೆದ್ದಿದ್ದಾರೆ. ಇದು ನಾಯಕನಿಗೆ ಜನರು ನೀಡುವ ಗೌರವ ಭಾನುಪ್ರಕಾಶ್ ಹೆಮ್ಮೆ ವ್ಯಕ್ತಪಡಿಸಿದರು.
ಅಭಿನಂದನೆ ಸ್ವೀಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಪಕ್ಷ ನನಗೆ ಮಾತನಾಡುವುದನ್ನು, ನಡೆದಾಡುವುದನ್ನು, ಸಂಘಟನೆ ಮಾಡುವುದನ್ನೂ ಕಲಿಸಿದೆ. ನಾನು ಎಂದೆಂದಿಗೂ ಪಕ್ಷದ ಕಾರ್ಯಕರ್ತನೆ ಎಂದರು.
ದ.ಕ.ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್. ಅಂಗಾರ, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಶಾಸಕರಾದ ಮಲ್ಲಿಕಾ ಪ್ರಸಾದ್, ಲಾಲಜಿ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.