ಮಂಗಳೂರು, ಜೂ.5: ದಕ್ಷಿಣ ಕನ್ನಡ ಜಿಲ್ಲೆಯ 227 ಗ್ರಾಪಂಗಳಿಗೆ ಮೇ 29ರಂದು ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಆರಂಭಗೊಂಡಿದ್ದು,ಮತ ಎಣಿಕೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ಗೊಳಿಸಲಾಗಿದೆ.
ಮಂಗಳೂರು ತಾಲೂಕಿನ 55 ಗ್ರಾ.ಪಂ.ಗಳ ಮತ ಎಣಿಕೆಯು ನಂತೂರು ಪಾದುವ ಹೈಸ್ಕೂಲ್, ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳ ಮತ ಎಣಿಕೆಯು ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ 46 ಗ್ರಾ.ಪಂ.ಗಳ ಮತ ಎಣಿಕೆಯು ಉಜಿರೆ ಎಸ್ಡಿಎಂ ಪದವಿ ಪೂರ್ವ ಕಾಲೇಜು, ಪುತ್ತೂರು ತಾಲೂಕಿನ 41ಗ್ರಾ.ಪಂ.ಗಳ ಮತ ಎಣಿಕೆಯು ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಳ್ಯ ತಾಲೂಕಿನ 28 ಗ್ರಾ.ಪಂ.ಗಳ ಮತ ಎಣಿಕೆಯು ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 8ರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಆರಂಭಗೊಂಡಿದೆ.
ಮಂಗಳೂರು ತಾಲೂಕಿಗೆ 120 ಮೇಜು, ಬಂಟ್ವಾಳಕ್ಕೆ 91, ಬೆಳ್ತಂಗಡಿಗೆ 75, ಪುತ್ತೂರಿಗೆ 80, ಸುಳ್ಯಕ್ಕೆ 40 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ಆರಂಭಿಸಲಾಗಿದೆ. ಆ ಬಳಿಕ ಒಂದಕ್ಕಿಂತ ಹೆಚ್ಚು ಸದಸ್ಯ ಸ್ಥಾನ ಹೊಂದಿರುವ ಕ್ಷೇತ್ರಗಳ ಮತ ಎಣಿಕೆ ಆರಂಭಗೊಳ್ಳಲಿದೆ. ಸೂಕ್ಷ್ಮ ಮತಗಟ್ಟೆಗಳ ಎಣಿಕೆಯ ವೀಡಿಯೊ ಚಿತ್ರೀಕರಣವೂ ನಡೆಸಲಾಗುತ್ತದೆ.
ಜಿಲ್ಲೆಯ 3,288 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 7,619 ಅಭ್ಯರ್ಥಿಗಳ ಭವಿಷ್ಯವನ್ನು 7,33,579 ಮಂದಿ ನಿರ್ಧರಿಸಿದ್ದರು. ಫಲಿತಾಂಶವು ಇಂದು ಸಂಜೆಯ ವೇಳೆಗೆ ಪ್ರಕಟಗೊಳ್ಳಲಿದ್ದು, ತದನಂತರವೇ ಫಲಿತಾಂಶದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಫಲಿತಾಂಶ ಘೋಷಣೆಯ ವಿಧಾನ
ಗ್ರಾ.ಪಂ. ಚುನಾವಣೆಯ ಫಲಿ ತಾಂಶ ಘೋಷಣೆಯ ವಿಧಾನ ಕೂಡ ವಿಶಿಷ್ಟವಾಗಿದೆ. ಇಬ್ಬರು ಅಭ್ಯರ್ಥಿಗಳಿಗೆ ಸಮಾನ ಮತ ಬಂದರೆ ಚೀಟಿ ಎತ್ತುವ ಮೂಲಕ ಆಯ್ಕೆಯನ್ನು ಸ್ಥಳದಲ್ಲೇ ಘೋಷಿಸಲಾಗುತ್ತದೆ. ಇನ್ನು ಮೂವರು ಸದಸ್ಯರಿರುವ ವಾರ್ಡ್ನಲ್ಲಿ ಅನುಸೂಚಿತ ಜಾತಿಯ ಮಹಿಳೆಯ 1 ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರೆ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.