ಕುಂದಾಪುರ: ತಾಲೂಕಿನ ಬೈಂದೂರು ಹಾಗೂ ಕುಂದಾಪುರ ಕ್ಷೇತ್ರದ ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿರುಸಿನಿಂದ ಸಾಗುತ್ತಿದೆ.
ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡ ಮತ ಎಣಿಕೆ ಕಾರ್ಯವೂ ಭರದಿಂದ ಸಾಗುತ್ತಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಡವ ಶುರುವಾಗಿದೆ.
ಮೇ.29 ರಂದು ನಡೆದಿದ್ದ ಪಂಚಾಯತ್ ಚುನಾವಣೆಯ ಮತಪೆಟಿಗೆಗಳನ್ನು ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿಡಲಾಗಿತ್ತು. ಅದನ್ನು ಇಂದು ಪೊಲೀಸರು ಹಾಗೂ ಕುಂದಾಪುರ ಉಪವಿಭಾಗಾಧಿಕಾರಿಗಳು, ತಹಶಿಲ್ದಾರ್ ಸಮಕ್ಷಮದಲ್ಲಿ ತೆಗೆದು ಮತಪೆಟ್ಟಿಗೆಗಳನ್ನು ಆಯಾಯ ಮತ ಎಣಿಕೆ ಕೊಠಡಿಗಳಿಗೆ ಕೊಂಡು ಹೋಗಿ ಎಣಿಕೆ ಕಾರ್ಯವನ್ನು ಆರಂಭಗೊಳಿಸಲಾಗಿದೆ.
ಮತ ಎಣಿಕೆ ಕೇಂದ್ರದ 2೦೦ ಮೀ ವ್ಯಾಪ್ತಿಯನ್ನು ನಿಷೇದಿತ ಪ್ರದೇಶವೆಂದು ಘೋಷಿಸಲಾಗಿದ್ದು, ಸೂಕ್ತ ತಪಾಸಣೆ ನಡೆಸಿ ಅಭ್ಯರ್ಥಿಗಳು, ಕಾರ್ಯಕರ್ತರನ್ನು ಎಣಿಕೆ ಕೇಂದ್ರಕ್ಕೆ ಬಿಡಲಾಗುತ್ತಿದೆ.
ಸ್ಥಳದಲ್ಲಿ ಅಗ್ನಿಶಾಮಕ ದಳ ವಾಹನ, ಆಂಬುಲೆನ್ಸ್ ಸೌಕರ್ಯವನ್ನು ನಿಯೋಜಿಸಲಾಗಿದ್ದು, ಭದ್ರತೆಗಾಗಿ ೧೫೦ಕ್ಕೂ ಅಧಿಕ ಪೊಲಿಸರನ್ನು ನಿಯೋಜಿಸಲಾಗಿದೆ.
ಸ್ಥಳದಲ್ಲಿ ಕುಂದಾಪುರ ಉಪವಿಭಾಗದ ಅಧಿಕಾರಿ ಚಾರುಲತಾ ಸೋಮಲ್, ತಹಶಿಲ್ದಾರ್ ಗಾಯತ್ರಿ ನಾಯಕ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದಾರೆ.