ಕುಂದಾಪುರ: ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಧಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರ ನಗರದ ಶಾಸ್ತ್ರೀ ವೃತ್ತದ ಸಮೀಪ ನಡೆದಿದೆ.
ಕುಂದಾಪುರದ ಯುನಿಟ್ ಹಾಲ್ ಸಮೀಪದ ನಿವಾಸಿ ಮೂಲತಃ ಬಂಟ್ವಾಳದವರಾದ ನರಸಿಂಹ ಐತಾಳ್ (48) ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಮೂಲತಃ ಬಂಟ್ವಾಳದ ದಾಸಬೈಲಿನವರಾದ ನರಸಿಂಹ ಐತಾಳ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕುಂದಾಪುರದಲ್ಲಿ ವಾಸಿಸುತಿದ್ದರು, ಅಲ್ಲದೇ ಕುಂದಾಪುರದ ಹರ್ಷ ರಿಫ್ರೆಶ್ಮೆಂಟ್ ಹೋಟೇಲಿನಲ್ಲಿ ಮ್ಯಾನೇಜರ್ ವೃತ್ತಿಯನ್ನು ಮಾಡಿಕೊಂಡಿದ್ದರು. ಗುರುವಾರ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಹಾಲಿನ ಫ್ಯಾಕೇಟ್ ಕೊಡಲೆಂದು ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಟಿಪ್ಪರ್ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತ ನರಸಿಂಹ ಐತಾಳ್ ಅವರು ಪತ್ನಿ ಸುಮತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.