ಬಂಟ್ವಾಳ, ಜೂನ್.04 : ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಎರ್ರಾಬಿರ್ರಿ ಚಲಿಸಿದ ಪರಿಣಾಮ ದ್ವಿಚಕ್ರ ವಾಹನ, ಬಸ್ ತಂಗುದಾಣ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬುಧವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್ ಜಂಕ್ಷನ್ನಲ್ಲಿ ನಡೆದಿದೆ.
ಕಲ್ಲು ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಆ್ಯಕ್ಟಿವ್ ಹೋಂಡಾವೊಂದಕ್ಕೆ ಢಿಕ್ಕಿ ಹೊಡೆದುದಲ್ಲದೆ ಪಕ್ಕದ ವಿದ್ಯುತ್ ಕಂಬ ಹಾಗೂ ಬಸ್ ತಂಗುದಾಣಕ್ಕೂ ಬಡಿದು ಹಾನಿ ಉಂಟಾಗಿದೆ. ಘಟನೆಯಿಂದ ಆ್ಯಕ್ಟಿವ್ ಹೋಂಡಾ ಸವಾರ ಕಾಂಪ್ರಬೈಲು ನಿವಾಸಿ ಶಿವಾನಂದ (26) ಗಂಭೀರ ಗಾಯಗೊಂಡು, ಬಿ.ಸಿ.ರೋಡ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ಮೆಲ್ಕಾರ್ನ ಪೆಟ್ರೋಲ್ ಬಂಕ್ನ ನೌಕರನಾಗಿದ್ದು, ಸಂಜೆ ಬಿರ್ವ ಸೆಂಟರ್ನ ಪಕ್ಕದ ರಸ್ತೆ ಬದಿಯಲ್ಲಿ ಆ್ಯಕ್ಟಿವ್ ಹೋಂಡಾ ನಿಲ್ಲಿಸಿ, ಮೊಬೈಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಅಡ್ಡ ರಸ್ತೆಯಲ್ಲಿ ಕಲ್ಲನ್ನು ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿಆ್ಯಕ್ಟಿವ್ ಹೋಂಡಾಕ್ಕೆ ಢಿಕ್ಕಿ ಹೊಡೆದು ಬಳಿಕ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೂ ಬಡಿದಿದ್ದರಿಂದ ಕಂಬ ತುಂಡರಿಸಲ್ಪಟ್ಟಿದೆ. ನಂತರ ಟಿಪ್ಪರ್ ಅಲ್ಲಿಯೇ ಇದ್ದ ಬಸ್ ತಂಗುದಾಣಕ್ಕೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ಸಂದರ್ಭ ಟಿಪ್ಪರ್ನಲ್ಲಿದ್ದ ಕಲ್ಲಿನ ರಾಶಿ, ಶಿವಾನಂದ ಅವರ ಕಾಲಿನ ಮೇಲೆ ಉರುಳಿ ಬಿದ್ದಿದ್ದು, ಸ್ಥಳೀಯ ಯುವಕರು ಧಾವಿಸಿ ಕಲ್ಲಿನ ರಾಶಿಯಿಂದ ಹೊರ ತೆಗೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.