ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಹೆಮ್ಮಾಡಿಯಿಂದ ಆರಂಭಗೊಂಡು ಬೈಂದೂರುವರೆಗೂ ತ್ವರಿತವಾಗಿಯೂ ಸಾಗುತ್ತಿದ್ದು, ಕೆಲವೆಡೆ ಕಾಮಗಾರಿ ಅವಾಂತರದಿಂದ ಹಲವು ಸಮಸ್ಯೆಗಳು ಸ್ರಷ್ಟಿಯಾಗಿದೆ. ಅಂತೆಯೇ ಬೈಂದೂರಿನ ಯಡ್ತರೆಯಲ್ಲಿ ಹೆದ್ದಾರಿ ಚತುಷ್ಪತ ಕಾಮಗಾರಿ ಅವಾಂತರದಿಂದ ಸುಮಾರು 250-300 ಮನೆಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಈ ಬಗ್ಗೆ ಒಂದು ವರದಿಯಿಲ್ಲಿದೆ.
ಚತುಷ್ಪತ ಕಾಮಗಾರಿಯನ್ನು ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿಯೇನೋ ಕಾಮಗಾರಿಯನ್ನು ತ್ವರಿತಗತಿಯಲ್ಲಿಯೇ ಮಾಡುತ್ತಿದೆ. ಆದ್ರೇ ಕಾಮಗಾರಿ ಭರದಲ್ಲಿ ಪೈಪುಗಳು ಒಡೆದು ಯಡ್ತರೆಯ 250-300 ಮನೆಗಳಿಗೆ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ. ಕಾಮಗಾರಿ ಆರಂಭದಿಂದಲೂ ಇದೇ ಸನಸ್ಯೆಯಾಗಿದ್ದರೂ ಕೂಡ ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಜಠಿಲವಾಗಿದೆ.
ಯಡ್ತರೆ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ಮುನ್ನೂರು ಮನೆಗಳ ಜನರೀಗ ಪರಿತಪಿಸುವಂತಾಗಿದ್ದು, ಟ್ಯಾಂಕರ್ ಮೂಲಕ ಪಂಚಾಯತ್ ವತಿಯಿಂದ ನೀರು ಪೂರೈಕೆ ಮಾಡುವ ಕಾರ್ಯ ಮಾಡಲಾಗುತ್ತಿದೆಆದರೂ ಮಳೆ ಬಂದಿರುವ ಕಾರಣ ರಸ್ತೆ ಹುಗಿಯುವುದು, ದಾರಿ ಸಮಸ್ಯೆ ಕಾರಣ ವಾಹನದ ಮೂಲಕ ಟ್ಯಾಂಕರಿನಲ್ಲಿ ನೀರು ಸರಬರಾಜು ಮಾಡುವುದು ಕಷ್ಟಸಾಧ್ಯವಾಗಿದೆ. ಅಲ್ಲದೇ ಟ್ಯಾಂಕರ್ ಒಂದಕ್ಕೆ 800 ರೂಪಾಯಿಯಂತೆ ದಿನಕ್ಕೆ 6 ಟ್ಯಾಂಕರ್ ನೀರು ಈ ಭಾಗಕ್ಕೆ ಅಗತ್ಯವಿರುವ ಕಾರಣ ದಿನಕ್ಕೆ 4,800 ರೂಪಾಯಿ ನೀರು ಪೂರೈಕೆಗೆ ವ್ಯಯವಾಗುತ್ತಿದೆ. ಇದು ಪಂಚಾಯತ್ ಬೊಕ್ಕಸಕ್ಕೂ ಕತ್ತರಿ ಹಾಕುತ್ತಿದೆ.
ಬುಧವಾರ ಸ್ಥಳಿಯ ಗ್ರಾಮಸ್ಥರು ಒಗ್ಗೂಡಿ ತಾಲೂಕು ಪಂಚಾಯತ್ ಸದಸ್ಯ ರಾಜೂ ಪೂಜಾರಿ, ಯಡ್ತರೆ ಗ್ರಾಮಪಂಚಾಯತ್ ಅಧ್ಯಕ್ಷ ನಾಗರಾಜ್ ಶೆಟ್ಟಿ ಅವರ ನೇತ್ರತ್ವದಲ್ಲಿ ಐ.ಆರ್.ಬಿ. ಕಂಪೆನಿ ಇಂಜಿನೀಯರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಮಾತುಕತೆ ನಡೆಸಿದರು. ಅಲ್ಲದೇ ಈ ವೇಳೆ ಉಢಾಫೆಯಾಗಿ ಮಾತನಾಡಿದ ಇಂಜಿಯರ್ ಯೋಗೇಂದ್ರಪ್ಪ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಬಳಿಕ ಸ್ಥಳಕ್ಕಾಗಮಿಸಿದ ಬೈಂದೂರು ವಿಶೇಷ ತಹಶಿಲ್ದಾರ್ ಕಿರಣ್ ಅವರು ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ, ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಇಂಜಿನಿಯರ್ ಅವರಿಗೆ ಸೂಚಿಸಿದರು.
ಪ್ರತಿ ಬಾರೀ ಮಳೆಗಾಲದ ಮೊದಲು ಯಡ್ತರೆ ಭಾಗದ ಜನರಿಗೆ ಕುಡಿಯಲು ಉಪ್ಪು ನೀರೇ ಗತಿಯಾಗಿದೆ. ಈ ಬಾರಿ ನೀರಿಗೂ ಹಾಹಾಕಾರ ಬಂದಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಘ್ರ ಹೋರಾಟ ಮಾಡುತ್ತೇವೆ ಎಂದು ಸ್ಥಳಿಯರು ಹಾಗೂ ತಾ.ಪಂ., ಸದಸ್ಯ ರಾಜು ಪೂಜಾರಿ ಆಗ್ರಹಿಸಿದ್ದಾರೆ.