ಜೂನ್ ತಿಂಗಳು “ಕಿಚ್ಚ’ ಸುದೀಪ್ ಅವರ ಪಾಲಿಗೆ ಮಹತ್ವದ ತಿಂಗಳಾಗಲಿದೆ. ಈ ಶುಕ್ರವಾರ (ಜೂನ್ 05) ಸುದೀಪ್ ಅಭಿನಯದ “ರನ್ನ’ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದರ ಜೊತೆಗೆ ಸುದೀಪ್ ಅಭಿನಯದ ಎರಡು ಚಿತ್ರಗಳು ಮುಹೂರ್ತವನ್ನಾಚರಿಸಿಕೊಳ್ಳಲಿವೆ.
ಇದಕ್ಕೂ ಮುನ್ನ ಸೂರಪ್ಪ ಬಾಬು ನಿರ್ಮಾಣದ ಮತ್ತು ಕೆ.ಎಸ್. ರವಿಕುಮಾರ್ ನಿರ್ದೇಶನದ “ಕೋಟಿಗೊಬ್ಬ’ ಚಿತ್ರವು ಜೂನ್ 12ಕ್ಕೆ ಶುರುವಾಗಲಿದೆ ಎಂದು ಸುದ್ದಿಯಾಗಿತ್ತು. ಅದರಂತೆ ಜೂನ್ 12ರ ಶುಕ್ರವಾರದಂದು “ಕೋಟಿಗೊಬ್ಬ’ ಚಿತ್ರದ ಮುಹೂರ್ತವಾಗಲಿದೆ. ಅದಕ್ಕೂ ಮುನ್ನವೇ ಸುದೀಪ್ ಅಭಿನಯದ ಇನ್ನೊಂದು ಚಿತ್ರ ಶುರುವಾಗಲಿದೆ. ಅದೇ “ಹೆಬ್ಬುಲಿ’. ಛಾಯಾಗ್ರಾಹಕ ಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಜೂನ್ 07ಕ್ಕೆ ಶುರುವಾಗಲಿದೆಯಂತೆ.
ಈ ಮುನ್ನ ಈ ಚಿತ್ರವನ್ನು ಎಂ.ಎನ್. ಕುಮಾರ್ ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗ ಆ ಚಿತ್ರವನ್ನು “ಆ್ಯಕ್ಸಿಡೆಂಟ್’ ಚಿತ್ರ ನಿರ್ಮಿಸಿದ್ದ ರಘುನಾಥ್ ತಮ್ಮ ಎಸ್.ಆರ್.ವಿ. ಪ್ರೊಡಕ್ಷನ್ಸ್ನಡಿ ನಿರ್ಮಿಸುತ್ತಿದ್ದಾರೆ. ಇನ್ನು ರಘುನಾಥ್ ನಿರ್ಮಿಸುತ್ತಿರುವ, “ಮಿಲನ’ ಪ್ರಕಾಶ್ ನಿರ್ದೇಶಿಸಲಿರುವ ಸುದೀಪ್ರ ಇನ್ನೊಂದು ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಆ ಜಾಗಕ್ಕೆ “ಹೆಬ್ಬುಲಿ’ ಬಂದಿದೆ. “ಹೆಬ್ಬುಲಿ’ ಚಿತ್ರದ ಮುಹೂರ್ತ ಸದ್ಯದಲ್ಲೇ ಆದರೂ, ಚಿತ್ರದ ಚಿತ್ರೀಕರಣ ಶುರುವಾಗುವುದು ಜುಲೈನಲ್ಲಿ. ಸದ್ಯಕ್ಕೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಪೂರ್ತಿಯಾಗಿ ಮುಗಿದಿಲ್ಲ. ಮುಹೂರ್ತದ ನಂತರ ಕಲಾವಿದರು ಮತ್ತು ತಂತ್ರಜ್ಞರನ್ನು ಆಯ್ಕೆ ಮಾಡುವುದಾಗಿ ಹೇಳುತ್ತಾರೆ ನಿರ್ದೇಶಕ ಕೃಷ್ಣ.
-ಉದಯವಾಣಿ