ಉಳ್ಳಾಲ ಜೂ, 03 : ಉಳ್ಳಾಲ ನಗರಸಭೆ ವ್ಯಾಪ್ತಿಗೊಳಪಡುವ, ನಗರಸಭಾ ಅಧ್ಯಕ್ಷೆ ಪ್ರತಿನಿಧಿಸುತ್ತಿರುವ ಕಾಪಿಕಾಡು ವಾರ್ಡ್ನಲ್ಲಿರುವ “ವೈನ್ & ಡೈನ್ ” ಬಾರ್ ಮತ್ತು “ಭಾರತ್ ಆಟೋ ಕಾರ್ಸ್ ” ಸಂಸ್ಥೆಯವರು ಕಳೆದ ಕೆಳ ತಿಂಗಳುಗಳಿಂದ ಅಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಗೆ ತಮ್ಮ ಮಳಿಗೆಯ ಕೊಳಚೆ ನೀರನ್ನು ಹರಿಯಲು ಬಿಡುತ್ತಿದ್ದು ,ಈ ಬಗ್ಗೆ ಸ್ಥಳಿಯರು ಅನೇಕ ಬಾರಿ ಈ ಹಿಂದಿನ ಪುರಸಭಾ ಆಡಳಿತಕ್ಕೆ ದೂರು ನೀಡಿದ್ದರು.
ಸಾರ್ವಜನಿಕರ ಸಮಸ್ಯೆ ಅರಿತ ಉಳ್ಳಾಲ ನಗರಸಭೆ ಮುಖ್ಯಧಿಕಾರಿ ರೂಪಾ ಟಿ ಶೆಟ್ಟಿ ಅವರು ಸ್ಥಳಕ್ಕೆ ದಾಳಿ ನಡೆಸಿ, ಸ್ಥಳ ಪರಿಶೀಲಿಸಿ ಸಂಬಂಧ ಪಟ್ಟ ಮಾಲಕರಿಗೆ ತ್ಯಾಜ್ಯ ವಿಲೇವಾರಿ ಮತ್ತು ಕೊಳಚೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವಂತೆ ಸೂಚನೆ ನೀಡಿದ್ದೇ ಅಲ್ಲದೆ ತಪ್ಪಿದ್ದಲ್ಲಿ ಎರಡೂ ಮಳಿಗೆಗಳ ಪರವಾನಿಗೆಗಳನ್ನು ರದ್ದುಗೊಳಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಧಾರ್ಮಿಕ ಪರಿಷತ್ ಜಿಲ್ಲಾ ಮಾಜಿ ಸದಸ್ಯರೊಬ್ಬರು ನಡೆಸುತ್ತಿರುವ ವೈನ್ & ಡೈನ್ ಬಾರ್ನವರು ಕಳೆದ ಕೆಲವು ವರುಷಗಳಿಂದ ಹೆದ್ದಾರಿಗೆ ದುರ್ನಾತ ಬೀರುವ ತ್ಯಾಜ್ಯ ಮತ್ತು ಕೊಳಚೆ ನೀರನ್ನು ಬಿಡುತ್ತಿದ್ದರೂ ಈ ವರೆಗೆ ಯಾರೊಬ್ಬ ಅಧಿಕಾರಿಗಳೂ ಇದರ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ.ಇದೀಗ ನಗರಸಭೆಯ ನೂತನ ಪೌರಯುಕ್ತೆ ರೂಪಾ ಟಿ ಶೆಟ್ಟಿ ಅವರು ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ ,ಪ್ರಭಾವಿ ಬಾರ್ ಮಾಲಕರ ವಿರುದ್ಧ ಕ್ರಮ ಕೈಗೊಂಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ನಗರಸಭಾ ಅಧ್ಯಕ್ಷೆ ಗಿರಿಜಾ ಬಾಯಿ ,ಉಪಾಧ್ಯಕ್ಷ ರಝಿಯಾ ಇಬ್ರಾಹಿಂ ಜೊತೆಗಿದ್ದರು.