ಫರೀದಾಬಾದ್, ಜೂ.3: ಹದಿನೈದರ ಹರೆಯದ ಬಾಲೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳಿಗೆ ತಲಾ ಹತ್ತು ಬೂಟಿನೇಟು ಹಾಗೂ 50 ಸಾವಿರ ರೂ.ದಂಡ ವಿಧಿಸಿದ ಅಮಾನವೀಯ ಪ್ರಕರಣ ಹರ್ಯಾಣದಿಂದ ವರದಿಯಾಗಿದೆ.
ಯಾವಾಗಲೂ ಅಮಾನವೀಯ ತೀರ್ಪುಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿರುವ ಹರ್ಯಾಣದ ಖಾಪ್ ಪಂಚಾಯತ್ನಿಂದಲೇ ಇಂತಹ ತೀರ್ಪು ಹೊರ ಬಂದಿರುವುದು.
ಈ ಘಟನೆ ನಡೆದಿರುವುದು ಮೇ 12ರಂದು. ಕೆಲ ದಿನಗಳ ಹಿಂದೆ ಝಾಕೊಪುರ ಗ್ರಾಮದಲ್ಲಿ ಹ್ಯಾಂಡ್ ಪಂಪ್ನಿಂದ ನೀರು ತರಲು ಬಾಲಕಿ ಹೋಗಿದ್ದಳು. ಆಗ ಈಕೆಯನ್ನು ಎಳೆದೊಯ್ದಿದ್ದ ಮನಾಫ್ ಮತ್ತು ಜಬೀದ್ ಎಂಬ ಕಾಮುಕ ಸಹೋದರರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೇ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಂದು ಹಾಕುವುದಾಗಿ ಬಾಲಕಿಗೆ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.
ಆದರೆ, ಬಾಲಕಿ ಧೈರ್ಯ ಮಾಡಿ ವಿಷಯವನ್ನು ಪೋಷಕರಿಗೆ ತಿಳಿಸಿದ್ದಳು. ಬಳಿಕ ಬಾಲಕಿ ಪೋಷಕರು ಊರ ಪಂಚಾಯಿತಿ ಮೊರೆ ಹೋದರು. ಆದರೆ ಪಂಚಾಯಿತಿ ಮುಖಂಡರು ನೀಡಿದ ತೀರ್ಪು ಕಂಡು ಸಂತ್ರಸ್ತ ಬಾಲಕಿ ಮತ್ತು ಆಕೆಯ ಪೋಷಕರು ಭ್ರಮ ನಿರಶನಗೊಂಡರು. ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ ಬಾಲಕಿಯ ಪೋಷಕರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅತ್ಯಾಚಾರಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.