ಉಳ್ಳಾಲ ಜೂ.02: ಉಳ್ಳಾಲ ದರ್ಗಾ ಅಧೀನದಲ್ಲಿ ನಡೆಸಲ್ಪಡುತ್ತಿರುವ ಕೋಟೆಪುರ ಟಿಪ್ಪು ಸುಲ್ತಾನ್ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ವಿತರಣೆ, ಒಂದನೇ ತರಗತಿ ದಾಖಲಾತಿ ಹಾಗೂ ಪಿಂಚಣಿ ರಹಿತರಾಗಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸುವ ಮೂಲಕ ಭಾವಪೂರ್ಣ ವಿದಾಯ ಹೇಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಮಾತನಾಡಿ, ದರ್ಗಾ ಅಧೀನದಲ್ಲಿ ಪ್ರಥಮವಾಗಿ ಆರಂಭಗೊಂಡಿರುವ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆ ಇದಾಗಿದ್ದು ಮಕ್ಕಳಿಗೆ ಅವಶ್ಯವಿರುವ ಹೊಸ ಬಸ್ ವ್ಯವಸ್ಥೆ ಸಂಘ, ಸಂಸ್ಥೆಗಳು ಹಾಗೂ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಲಾಗುವುದು, ಡೆಸ್ಕ್, ಬೆಂಚುಗಳ ಕೆಲಸ ನಡೆಯುತ್ತಿದ್ದು ಅಗತ್ಯವಿರುವ ಶಾಲೆಗಳಿಗೆ ಪೂರೈಸಲಾಗುತ್ತದೆ. 2014-15 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.93 ಫಲಿತಾಂಶ ಬಂದಿದ್ದು ಉಳ್ಳಾಲಕ್ಕೆ ಹೆಮ್ಮೆಯ ವಿಚಾರ. ನಿವೃತ್ತರಿಗೆ ಅಗತ್ಯ ಸಹಾಯ ನೀಡಲು ದರ್ಗಾ ಸಮಿತಿ ಸಿದ್ಧವಿದೆ ಎಂದರು.
ಭಾವಪೂರ್ಣ ವಿದಾಯ:
ಇದೇ ಸಂದರ್ಭದಲ್ಲಿ ಪ್ರೌಢ ಶಾಲೆಯಲ್ಲಿ 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕ ಇಬ್ರಾಹಿಂ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಉರ್ದು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ನುಸ್ರತುಲ್ ನಿಶಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಜಂಟಿ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್, 1991 ರಲ್ಲಿ ಅಂಚೆ ಕಾರ್ಡ್ ಮೂಲಕ ಕೆಲಸದ ಬೇಡಿಕೆ ಮುಂದಿಟ್ಟು ಶಾಲೆಗೆ ಸೇರಿದ್ದ ಇಬ್ರಾಹಿಂ ಮಾಸ್ಟರ್ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯ ಕೊನೆಯ ಅವಧಿಯಲ್ಲಿ ಸರ್ಕಾರದಿಂದ ವೇತನ ಬಂದಿದ್ದು ಪಿಂಚಣಿ ಇಲ್ಲದೆ ನಿವೃತ್ತರಾಗುತ್ತಿರುವುದು ದುರಂತ. ಈ ನಿಟ್ಟಿನಲ್ಲಿ ಹೋರಾಟ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಒಂದನೇ ತರಗತಿಗೆ ಸೇರಿದ ಮಕ್ಕಳ ದಾಖಲಾತಿ ಹಾಗೂ ಹೆತ್ತವರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ಉರುಸ್ ಯಶಸ್ವಿಗೆ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಹಾಗೂ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹನೀಫ್ ಅವರನ್ನು ಸನ್ಮಾನಿಸಲಾಯಿತು. ಚಿತ್ರಕಲಾ ಶಿಕ್ಷಕ ಬಿ.ಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಪ್ರೌಢ ಶಾಲೆ ಶಿಕ್ಷಕಿ ಗೀತಾ ಸನ್ಮಾನಿತರ ವಿವರ ಓದಿದರು.
ಸಂಸ್ಥೆಯ ಸಂಚಾಲಕ ಎ.ಕೆ.ಮೊಯಿದ್ದೀನ್, ದರ್ಗಾ ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಉಮರ್ ಹಾಜಿ, ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ, ಚಾರಿಟೇಬಲ್ ಟ್ರಸ್ಟ್ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಹಮೀದ್, ಹಸನ್, ಬಶೀರ್ ಮೊದಲಾದವರು ಉಪಸ್ಥಿತರಿದ್ದರು.