_ಸತೀಶ್ ಕಾಪಿಕಾಡ್.
ಮಂಗಳೂರು : ಜೀ ಕನ್ನಡ ವಾಹಿನಿಯನ್ನು ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿಸುವ ಪ್ರಯತ್ನ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದೇವೆ. ಈ ಹೊಸ ಅಲೆಯಲ್ಲಿ ಪ್ರಾರಂಭವಾದ ‘ಶ್ರೀರಸ್ತು ಶುಭಮಸ್ತು’, ‘ಜೊತೆಜೊತೆಯಲಿ’, ಶುಭವಿವಾಹ, ‘ಲವ್ಲವಿಕೆ’, Mr. & Mrs ರಂಗೇಗೌಡ’ ಮತ್ತು ‘ಒಂದೂರ್ನಲ್ಲಿ ರಾಜರಾಣಿ’ ಧಾರಾವಾಹಿಗಳಿಗೆ ನಮ್ಮ ನಿರೀಕ್ಷೆಯನ್ನೂ ಮೀರಿದ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಇದೇ ಜೂನ್ ೮ ರಿಂದ ಸಂಜೆ ೬:೩೦ ಕ್ಕೆ ‘ಗೃಹಲಕ್ಷ್ಮಿ’ ಹೆಸರಿನ ಮತ್ತೊಂದು ಧಾರಾವಾಹಿಯನ್ನು ಪ್ರಿಯ ವೀಕ್ಷಕರ ಮುಂದಿಡುತ್ತಿದ್ದೇವೆ ಎಂದು ಗೃಹಲಕ್ಷ್ಮಿ ಧಾರವಾಹಿಯ ಮುಖ್ಯಸ್ಥ ( ಫಿಕ್ಸೆನ್ ಹೆಡ್ ) ಸುಧನ್ವ ದೇರಾಜೆ ಹೇಳಿದರು.
ಮಂಗಳೂರಿನ ಹೊಟೇಲ್ ದೀಪಾ ಕಂಫರ್ಟ್ಸ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಧಾರಾವಾಹಿ ಬಗ್ಗೆ ಮಾಹಿತಿ ನೀಡಿದ ಅವರು, ‘ಗೃಹಲಕ್ಷ್ಮಿ’-ಇದು ತುಂಬ ನೆಮ್ಮದಿಯಿಂದ ಕೂಡಿರುವ ಶ್ರೀಮಂತ ಕುಟುಂಬದ ಕತೆ. ಗಂಡ-ಹೆಂಡತಿ ಮತ್ತು ಮೂವರು ಮಕ್ಕಳಿರುವ ಈ ಕುಟುಂಬದ ಒಡತಿಯ ಹೆಸರೇ ಲಕ್ಷ್ಮಿ. ಈಕೆ ಪ್ರತಿ ಮನೆಯ ಸಂಪತ್ತು. ಆರ್ಕಿಟೆಕ್ಟ್ ಆಗಿರೋ ದೊಡ್ಡ ಕಟ್ಟಡ ನಿರ್ಮಾಣ ಕಂಪನಿಯ ಒಡೆಯ ರಾಘವ ಹಾಗೂ ಶಿವಮೊಗ್ಗದಲ್ಲಿ ಪಿಯುಸಿ ಓದಿ ಮಧ್ಯಮ ಕುಟುಂಬದಿಂದ ಬೆಂಗಳೂರಿಗೆ ಬಂದು ಗಂಡನ ಜತೆ ನೆಲೆಸಿರುವ ಲಕ್ಷ್ಮಿ ಆದರ್ಶ ದಂಪತಿಯ ಹಾಗಿದ್ದಾರೆ.
ಇವರಿಗೆ ಮೂವರು ಮಕ್ಕಳು ಐಶ್ವರ್ಯ, ಅನಿರುದ್ಧ ಮತ್ತು ಅದಿತಿ. ಜತೆಗೆ ರಾಘವನ ಅಮ್ಮ ಮಂಗಳಮ್ಮ ಕೂಡಾ ಮನೆಯಲ್ಲಿದ್ದಾರೆ. ಈ ಎಲ್ಲರಿಗೂ ಲಕ್ಷ್ಮಿ ಅಂದ್ರೆ ಪಂಚಪ್ರಾಣ. ಲಕ್ಷ್ಮಿಯೂ ತನ್ನ ದಿನಚರಿಯನ್ನೆಲ್ಲ ಈ ಮನೆ ಮಂದಿಗಾಗಿ ಮೀಸಲಿಟ್ಟಿದ್ದಾಳೆ. ಅವಳು ಡ್ರೈವಿಂಗ್ ಕಲಿಯೋದು ಮಕ್ಕಳನ್ನ ಸ್ಕೂಲಿಗೆ ತಲುಪಿಸೋದಕ್ಕಾಗಿ, ಅವಳು ಇಂಗ್ಲಿಷ್ ಕಲಿಯೋದು ಮಕ್ಕಳ ಹೋಮ್ವರ್ಕ್ನಲ್ಲಿ ನೆರವಾಗುವುದಕ್ಕಾಗಿ. ಹೀಗೆ ತನ್ನ ಕುಟುಂಬದ ಆಗು-ಹೋಗು ಮತ್ತು ಸುಖ ದುಃಖಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಸ್ಪಂದಿಸುವ ಲಕ್ಷ್ಮಿ ಮೇಲೇನೇ ಗಂಡ ಮತ್ತು ಮಕ್ಕಳು ಹೆಚ್ಚು ಅವಲಂಬಿತರಾಗಿರುತ್ತಾರೆ. ಆದರೆ ಈಕೆಯ ಮನಸಲ್ಲೇನೋ ಒಂದು ದೊಡ್ಡ ಕೊರಗಿದೆ. ಅದು ಏನು? ಅದರಿಂದ ಆಕೆ ಪಾರಾಗಿ ಬರ್ತಾಳಾ, ಬರೋದಾದರೆ ಹೇಗೆ? ಆ ಪ್ರಯಾಣದಲ್ಲಿ ಅವಳ ಕಷ್ಟಸುಖಗಳಿಗೆ ಜತೆಯಾಗೋರು ಯಾರ್ಯಾರು ಅನ್ನೋದೇ ಕತೆಯ ಕುತೂಹಲ ಎಂದು ವಿವರಿಸಿದರು.
ಸಿನಿಮಾ ಮತ್ತು ಟಿ.ವಿ ನಿರೂಪಣೆಯಲ್ಲಿ ಗುರುತಿಸಿಕೊಂಡಿರುವ ಸನಾತಿನಿ ಲಕ್ಷ್ಮಿಯಾಗಿ ಅಭಿನಯಿಸುತ್ತಿದ್ದು, ಚಂದ್ರು ಬಿ. ಅಮಿತ್, ಮೋನೀಶಾ ಶ್ರೇಯಾ ಮತ್ತು ಕಿರುತೆರೆಯ ಹಿರಿಯ ನಟಿ ಜಯಮ್ಮ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಗಾರು ಮಳೆಯ ಕ್ಯಾಮರಾಮಾನ್ ಆಗಿ ಹೆಸರು ಮಾಡಿರುವ, ಗಜಕೇಸರಿ ನಿರ್ದೇಶಕ ಕೃಷ್ಣ ಅವರ ಪ್ರಧಾನ ನಿರ್ದೇಶನದಲ್ಲಿ ‘ಗೃಹಲಕ್ಷ್ಮಿ’ ಮೂಡಿಬರಲಿದ್ದು, ನಟಿ ಸ್ವಪ್ನ ಕೃಷ್ಣ ಅವರು ತಮ್ಮ ಆರ್.ಆರ್.ಆರ್ ಕ್ರಿಯೇಷನ್ಸ್ ಸಂಸ್ಥೆಯ ಮೂಲಕ ಈ ಧಾರಾವಾಹಿಯ ನಿರ್ಮಾಣ ಮಾಡುತ್ತಿದ್ದಾರೆ. ಗಿರೀಶ್ ಕುಮಾರ್ ಜಿ.ಎನ್ ಸಂಚಿಕೆ ನಿರ್ದೇಶಕರಾಗಿದ್ದು, ಸೆಲ್ವಂ ಚಿತ್ರಕಥೆ ಬರೆಯುತ್ತಿದ್ದಾರೆ. ಈ ಧಾರಾವಾಹಿಯನ್ನು Red epic ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದು, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ Red epic ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡ ಧಾರಾವಾಹಿ ಎಂಬ ಹೆಗ್ಗಳಿಕೆ ‘ಗೃಹಲಕ್ಷ್ಮಿ’ ಯದಾಗಿದೆ ಎಂದು ಸುಧನ್ವ ದೇರಾಜೆ ಹೇಳಿದರು.
ಸಾವಿರ ಸಂಚಿಕೆಗಳನ್ನು ಪೂರೈಸಿರುವ ಜನಪ್ರಿಯ ಧಾರಾವಾಹಿ ‘ರಾಧಾ ಕಲ್ಯಾಣ’ ಮುಕ್ತಾಯವಾಗುತ್ತಿದ್ದು, ಈ ಹೊಸ ಧಾರಾವಾಹಿ ಇದೇ ಜೂನ್ ೮ ರಿಂದ (ಸೋಮವಾರದಿಂದ-ಶನಿವಾರದವರೆಗೆ) ಸಂಜೆ ೬:೩೦ ಕ್ಕೆ ಪ್ರಸಾರವಾಗಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಂಗಾರು ಮಳೆ ಚಿತ್ರದ ಕ್ಯಾಮರಾಮಾನ್ ಆಗಿ ಗಮನ ಸೆಳೆದ,ಗಜಕೇಸರಿ ಚಲನ ಚಿತ್ರದ ನಿರ್ದೆಶಕ ಹಾಗೂ ಗೃಹಲಕ್ಷ್ಮಿ ಧಾರವಾಹಿಯ ನಿರ್ದೇಶಕ ಕೃಷ್ಣ, ಧಾರವಾಹಿಯ ನಿರ್ಮಾಪಕಿ ಹಾಗೂ ನಟಿ ಸ್ವಪ್ನ ಕೃಷ್ಣ ಮತ್ತು ನಾಯಕ ನಟ ಚಂದ್ರು ಬಿ., ನಾಯಕಿ ನಟಿ ಸನಾತಿನಿ ಮುಂತಾದವರು ಧಾರಾವಾಹಿಯ ಪೂರಕ ಮಾಹಿತಿಗಳನ್ನು ನೀಡಿದರು.