ಮಂಗಳೂರು : ಮಗಳೂರು ನಗರ ಪೊಲೀಸ್ ಕಮಿಷನರೆಟ್ ತನ್ನ ಮೊಬೈಲ್ ಆ್ಯಪ್ನ ಸುಧಾರಿತ (2ನೇ) ಆವೃತ್ತಿಯನ್ನು ಅನಾವರಣಗೊಳಿಸಿದೆ.
ಸೋಮವಾರ ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸ್ ಆಯುಕ್ತ ಎಸ್. ಮುರುಗನ್, ಡಿಸಿಪಿ ಎನ್. ವಿಷ್ಣುವರ್ಧನ್, ಆರ್ಜೆ ಪ್ರಸನ್ನ ಮತ್ತು ಆರ್ಜೆ ಶಿಲ್ಪಾ, ಕಲಾವಿದರಾದ ಶಿಲ್ಪಾ ಸುವರ್ಣ, ಸುರಕ್ಷಿತಾ ಶೆಟ್ಟಿ, ಅಮೃತ್ ಶೆಣೈ ಅವರು ಸಂಯುಕ್ತವಾಗಿ ಸುಧಾರಿತ ಆ್ಯಪ್ನ ಬಿಡುಗಡೆ ನೆರವೇರಿಸಿದರು. ಮೊಬೈಲ್ ಆ್ಯಪ್ನ್ನು ಅಭಿವೃದ್ಧಿ ಪಡಿಸಿದ ದಿಯಾ ಸಿಸ್ಟಮ್ಸ್ನ ಸಿಇಒ ರವಿಚಂದ್ರನ್ ಮತ್ತು ಸಿಬಂದಿ ಉಪಸ್ಥಿತರಿದ್ದರು.
ಸುಧಾರಿತ ಮೊಬೈಲ್ ಆ್ಯಪ್ನಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಗೆ ಸಂಬಂಧಿಸಿ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಅನುಕೂಲತೆ, ಕಮಿಷನರೆಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ (2014- 15ರಲ್ಲಿ) ಎಫ್ಐಆರ್ಗಳ ಪ್ರಸ್ತುತ ಸ್ಥಿತಿ ಗತಿ, ಸಂಚಾರ ನಿಯಮಾವಳಿಗಳು, ದೈನಂದಿನ ಅಪರಾಧ ವರದಿಗಳು, ಯಾವ ಪೊಲೀಸ್ ಠಾಣೆ ಎಲ್ಲಿದೆ ಎಂಬ ಮಾಹಿತಿ, ಪಾರ್ಕಿಂಗ್ ಮತ್ತು ನೋ ಪಾರ್ಕಿಂಗ್ ಸ್ಥಳಗಳು, ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ವ್ಯವಸ್ಥೆ, ಪ್ರಸ್ತುತ ಸಂಚಾರ ಸ್ಥಿತಿ, ಪೊಲೀಸ್ ಅಧಿಕಾರಿಗಳ ಫೋನ್ ನಂಬ್ರಗಳ ಮಾಹಿತಿ ಇದೆ ಎಂದು ಪೊಲೀಸ್ ಆಯುಕ್ತ ಎಸ್. ಮುರುಗನ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮಂಗಳೂರಿನ ಎಲ್ಲ 18 ಪೊಲೀಸ್ ಠಾಣೆಗಳ ಗಡಿ ರೇಖೆಗಳನ್ನು ಇದರಲ್ಲಿ ಹಾಕಲಾಗಿದೆ. ನಗರದ ವ್ಯಾಪ್ತಿಯಲ್ಲಿ ಸಂಚರಿಸುವವರು ತಾವು ಯಾವ ಸ್ಥಳದಲ್ಲಿದ್ದೇವೆ ಮತ್ತು ಈ ಸ್ಥಳದ ಪೊಲೀಸ್ ಠಾಣೆ ವ್ಯಾಪ್ತಿಯ ಮಾಹಿತಿ ಇದರಲ್ಲಿ ಲಭ್ಯ.
ಸುರಕ್ಷೆ :
ತುರ್ತು ಸಂದರ್ಭಗಳಲ್ಲಿ ತಾವು ಬೇಕಾದವರ ಫೋನ್ ನಂಬ್ರಗಳನ್ನು ಮುಂಚಿತವಾಗಿ ತಮ್ಮ ಮೊಬೈಲ್ಗಳಲ್ಲಿ ನಮೂದಿಸಿರ ಬೇಕು. ಯಾವುದೇ ಅನಾಹುತ ಸಂಭವಿಸಿದ ಸಂದರ್ಭಗಳಲ್ಲಿ ಮಹಿಳೆಯರು/ ಮಕ್ಕಳು ಮೊಬೈಲ್ ಫೋನನ್ನು 5 ಬಾರಿ ತೀವ್ರವಾಗಿ ಶೇಕ್ ಮಾಡಿದರೆ ಅಥವಾ 5 ಬಾರಿ ಆನ್- ಆಫ್ ಮಾಡಿದರೆ ತುರ್ತು ಸಂದೇಶ ಸಂಬಂಧ ಪಟ್ಟ ವ್ಯಕ್ತಿಯ ಮೊಬೈಲ್ಗೆ ಹೋಗುತ್ತದೆ.
ಮೊಬೈಲ್ ಆ್ಯಪ್ನ ಮೊದಲ ಆವೃತ್ತಿ ಬಿಡುಗಡೆಯಾದಾಗ ಹಲವು ಮಂದಿ ಸಾರ್ವಜನಿಕರು ಸಂತಸ ಪಟ್ಟು ಮಾಹಿತಿ ಕಳುಹಿಸಿದ್ದರು. ಅವರ ಸಲಹೆ, ಸೂಚನೆಗಳನ್ನು ಪರಿಶೀಲಿಸಿ ಈ ಸುಧಾರಿತ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಯುಕ್ತ ಎಸ್. ಮುರುಗನ್ ವಿವರಿಸಿದರು.