ಉಡುಪಿ: ರಸ್ತೆ ದಾಟಲು ನಿಂತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದು ನಿವೃತ್ತ ಡಿವೈಎಸ್ಪಿ ಮಂಗಳೂರು ಪಡೀಲ್ ನಿವಾಸಿ ಬೆಳ್ತಂಗಡಿ ಜಯ ಭಂಡಾರಿ (ಬಿ.ಜೆ. ಭಂಡಾರಿ ) ಮೃತಪಟ್ಟ ಘಟನೆ ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಬಳಿ ಸೋಮವಾರ ನಡೆದಿದೆ.
ಬಿ.ಜೆ. ಭಂಡಾರಿ ಅವರ ಸಂಬಂಧಿಕರ ಮದುವೆ ರವಿವಾರ ನಡೆದಿದ್ದು, ಸೋಮವಾರ ಬ್ರಹ್ಮಾವರದಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಎಸ್ಎಂಎಸ್ ಕಾಲೇಜು ಬಳಿಯ ಹೊಟೇಲೊಂದರಲ್ಲಿ ಊಟ ಮುಗಿಸಿ ಹೆದ್ದಾರಿ ದಾಟಲು ನಿಂತಿದ್ದಾಗ ಕಾರು ಢಿಕ್ಕಿ ಹೊಡೆದಿದೆ.ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು.
ಭಂಡಾರಿ ಅವರ ಪತ್ನಿ ಪ್ರಫುಲ್ಲಾ ಜೆ. ಭಂಡಾರಿ ಮಂಗಳೂರು ಕಾರ್ಪೊರೇಶನ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಮಗ ಉತ್ತರ ಪ್ರದೇಶದಲ್ಲಿ ಭೂಸೇನೆಯ ವೈದ್ಯ ಡಾ| ರೋಹನ್ ಮತ್ತು ಮಗಳು ಕಾರ್ಪೊರೇಶನ್ ಬ್ಯಾಂಕ್ ಬೆಂಗಳೂರು ಇಂದಿರಾನಗರ ಶಾಖೆ ಉದ್ಯೋಗಿ ರೋಶನಿ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಜೆ. ಭಂಡಾರಿ ಬಗ್ಗೆ: ಎಸ್ಐ ಆಗಿ ಪೊಲೀಸ್ ಸೇವೆಗೆ ಸೇಪೇಡೆಗೊಂಡಿದ್ದ ಅವರು ಪದೋನ್ನತಿಗೊಂಡು ಇನ್ಸ್ಪೆಕ್ಟರ್, ಡಿವೆಎಸ್ಪಿ, ಎಸಿಪಿಯಾಗಿ ನಿವೃತ್ತರಾಗಿದ್ದರು. ಉತ್ತಮ ಕರ್ತವ್ಯಕ್ಕೆ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆದಿದ್ದಾರೆ. ಮಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರು, ದ.ಕ. ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸ್ಥಾಪಕರಾಗಿದ್ದ ಅವರು ಪ್ರಸ್ತುತ ಅಧ್ಯಕ್ಷರಾಗಿದ್ದರು.
