ಮಂಗಳೂರು, ಮೇ 31: ಮಂಗಳೂರು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೆ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಸಂದರ್ಭ ಕುಡಿಯುವ ನೀರಿನ ಪೈಪ್ ಒಡೆದು ಹಾಕಿರುವ ಹಿನ್ನೆಲೆಯಲ್ಲಿ ಖಾಸಗಿ ದೂರವಾಣಿ ಸಂಸ್ಥೆಯ ಎಲ್ಲ ಕಾಮಗಾರಿಯನ್ನು ತಡೆಹಿಡಿಯುವಂತೆ ಶಾಸಕ ಜೆ.ಆರ್.ಲೋಬೊ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
ನಗರದ ಬೆಂದೂರ್ ಸಮೀಪ ಖಾಸಗಿ ದೂರವಾಣಿ ಸಂಸ್ಥೆಯೊಂದು ಭೂಗತ ಕೇಬಲ್ ಅಳವಡಿಸುತ್ತಿತ್ತು. ಈ ಸಂದರ್ಭ ನೀರಿನ ಪೈಪ್ ಒಡೆದುಹೋಗಿ ನೀರು ಪೋಲಾಗಿರುವುದು ಮಾತ್ರವಲ್ಲದೆ ಖಾಸಗಿ ಶಾಲೆಗೆ ತೆರಳುವ ಹಾದಿಗೆ ಅಳವಡಿಸಿದ್ದ ಇಂಟರ್ಲಾಕ್ ಕೂಡಾ ಹಾನಿಗೀಡಾಗಿದೆ.
ಶುಕ್ರವಾರ ರಾತ್ರಿ ವೇಳೆ ನೀರಿನ ಪೈಪ್ ಒಡೆದುಹೋಗಿದ್ದು, ಕೇಬಲ್ ಅಳವಡಿಕೆ ಮಾಡುತ್ತಿದ್ದ ಕಾರ್ಮಿಕರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ತೆರಳಿದ್ದಾರೆ. ಇದರಿಂದ ಶನಿವಾರ ಬೆಳಗ್ಗಿನವರೆಗೆ ನೀರು ಪೋಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಲೋಬೊ ಅವರು ಮಂಗಳೂರು ಮನಪಾ ಆಯುಕ್ತೆ ಹೆಫ್ಸಿಬಾ ರಾಣಿಯವರಿಗೆ ಕರೆ ಮಾಡಿ, ಹಾನಿಯ ಸಂಪೂರ್ಣ ವೆಚ್ಚವನ್ನು ಖಾಸಗಿ ದೂರವಾಣಿ ಸಂಸ್ಥೆಯೇ ಭರಿಸುವಂತೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ್ದಾರೆ.