ಮಂಗಳೂರು,ಮೇ.20 : ನಗರದ ಶಕ್ತಿನಗರದಲ್ಲಿರುವ ಯು ಶ್ರೀನಿವಾಸ್ ಮಲ್ಯ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆಯನ್ನುಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ನಡೆಸಿದರು. ಇದೇ ಸಂದರ್ಭದಲ್ಲಿ ಬಡಾವಣೆ ನಿವಾಸಿಗಳು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ಭರವಸೆಗಳಲ್ಲಿ ಕೆಲವೊಂದು ಸೌಲಭ್ಯಗಳಿಂದ ವಂಚಿತರಾಗಿದ್ದು ಇವುಗಳಿಗೆ ಸ್ಪಂದಿಸಬೇಕಾಗಿ ಶಾಸಕರಲ್ಲಿ ವಿನಂತಿಸಿದರು.
ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಶ್ರೀನಿವಾಸ ಮಲ್ಯ ಜನ್ಮ ಶತಾಬ್ಧಿಯ ಸ್ಮರಣಾರ್ಥ, ಅಡ್ಡ ರಸ್ತೆಗಳಿಗೆ ನಾಮಕರಣ, ಬಸ್ ಸೌಕರ್ಯ, ವಾಚನಾಲಯ ಮಂತಾದವುಗಳನ್ನು ನಿರ್ಮಿಸಲು ಸಂಘದ ಪರವಾಗಿ ವಾಮನ್ ಬಿ ಮೈದಾನ್ ಪ್ರಧಾನ ಕಾರ್ಯದರ್ಶಿ ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕರು ತನ್ನ ಶಾಸಕ ನಿಧಿಯಿಂದ ಗ್ರಂಥಾಲಯವನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು. ಉಳಿದ ಸಮಸ್ಯೆಗಳಿಗೆ ಬಗೆಹರಿಸುವಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ನಿವಾಸಿಗಳ ಮನವಿಗೆ ಸ್ಪಂದಿಸಿದರು.
ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಲ್, ಕಾರ್ಪೋರೇಟರ್,ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪ್ರಕಾಶ್ ಸಾಲಿಯಾನ್, ಅಖಿಲ ಆಳ್ವ, ಸಂಘದ ಅಧ್ಯಕ್ಷ ಕೃಷ್ಣಪ್ಪ ಕೆ, ಉಪಾಧ್ಯಕ್ಷ ಅನಿಲ್ ವಾಸ್, ಕಾರ್ಯದರ್ಶಿ ವಿ.ಬಿ ಮೈದಾನ್, ಜೊತೆ ಕಾರ್ಯದರ್ಶಿ ನವೀನ್ ಕೆ.ಎಲ್, ಕೋಶಾಧಿಕಾರಿ ಜಯಪ್ಪ, ಕಾನೂನು ಸಲಹೆಗಾರ ನವೀನ್ ಬನ್ನಿತ್ತಾಯ ಉಪಸ್ಥಿತರಿದ್ದರು.