ಕುಂದಾಪುರ: ಕುಂದಾಪುರ ಕಡೆಯಿಂದ ಶಿವಮೊಗ್ಗದ ಕಡೆಗೆ ಸಾಗುತ್ತಿದ್ದ ಲಾರಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಎದುರಿನಿಂದ ಬರುತ್ತಿದ್ದ ಬುಲ್ಲೆಟ್ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬುಲ್ಲೆಟ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಂಗಡಿ ರಸ್ತೆಯ ಮತ್ತಿಬೇರು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕುಂದಾಪುರದ ವಕ್ವಾಡಿಯ ವಿ. ಸುಕುಮಾರ ಶೆಟ್ಟಿ (27) ಅವರೇ ಅಪಘಾತದಲ್ಲಿ ಸಾವನ್ನಪ್ಪಿದ್ದು ಇವರು ಸಾಗರ ತಾಲೂಕಿನ ಬಟ್ಟೆಮಲಪ್ಪದಲ್ಲಿ ಉದ್ಯಮಿಯಾಗಿದ್ದರು.
ಸಾಗರದಲ್ಲಿ ಉದ್ಯಮಿಯಾಗಿದ್ದ ಇವರು ತನ್ನ ತಂಗಿಯನ್ನು ಕಾಲೇಜಿಗೆ ಸೇರಿಸಲು ಬುಲೆಟ್ ಬೈಕಿನಲ್ಲಿ ತಾಯಿ ಮನೆಯಾದ ವಕ್ವಾಡಿಗೆ ಆಗಮಿಸುವಾಗ ಈ ಘಟನೆ ಸಂಭವಿಸಿದೆ. ಲಾರಿ ಕುಂದಾಪುರದಲ್ಲಿ ಮರಳು ತುಂಬಿಕೊಂಡು, ಶಿವಮೊಗ್ಗದ ಕಡೆ ಸಾಗುತ್ತಿರುವಾಗ, ಸಿದ್ದಾಪುರ ಸಮೀಪದ ಮತ್ತಿಬೇರು ಎಂಬಲ್ಲಿ ಬಕಿಗೆ ನೇರವಾಗಿ ಢಿಕ್ಕಿ ಈ ಘಟನೆ ನಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಸುಕುಮಾರ್ ಅವರು ರಸ್ತೆಗೆ ಬಿದ್ದಿದ್ದಾರೆ, ತಲೆಯಲ್ಲಿದ್ದ ಹೆಲ್ಮೆಟ್ ಹಾಗೂ ತಲೆ ಕೂಡ ಒಡೆದು ಅವರು ಸ್ಥಳದಲ್ಲಿಯೇ ಮೃತಪಟ್ಟರು.
ಮೃತ ವಿ. ಸುಕುಮಾರ ಶೆಟ್ಟಿ ಅವರು ಬೆಂಗಳೂರಿನಲ್ಲಿ ಡಿಪ್ಲೊಮಾ ಎಂಜಿನಿಯರ್ರಾಗಿದ್ದು ಕೆಲ ಸಮಯಗಳ ಹಿಂದೆ ಆ ವ್ರತ್ತಿ ಬಿಟ್ಟು ಬಟ್ಟೆಮಲಪ್ಪದಲ್ಲಿ ಸ್ವಂತ ಉದ್ಯೋಗ ಆರಂಭಿಸಿದ್ದರು. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.