ಮಂಗಳೂರು,ಮೇ.19: ಪಡೀಲ್ – ಪಾಲ್ಘಾಟ್ ವಿಭಾಗದಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು 6.30 ಕೋ.ರೂ. ಬಿಡುಗಡೆಯಾಗಿದ್ದು. ಈಗಾಗಲೇ ಜೆಪ್ಪು ಮಹಾಕಾಳಿ ಪಡ್ಪು ಅಂಡರ್ ಪಾಸ್ ಕಾಮಗಾರಿಗೆ 13.90 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ತಮ್ಮ ಇಚ್ಛಾಶಕ್ತಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಸಲ್ಲದು. ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ನಳಿನ್ ಕುಮಾರ್ ಸೂಚನೆ ನೀಡಿದರು. ಅವರು ಸೋಮವಾರ ರೈಲ್ವೆ ಕಾಮಗಾರಿ ಯೋಜನೆಗಳ ಕುರಿತಂತೆ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಪಡೀಲ್ ಮೇಲ್ಸೇತುವೆ ಕಾಮಗಾರಿ ಕುಂಠಿತಗೊಂಡಿರುವುದರ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿ ಕಾಮಗಾರಿ ವೇಗಪಡೆಯುತ್ತಿಲ್ಲ. ರೈಲ್ವೇ ಕುರಿತು ಇಲ್ಲಿನ ಸಮಸ್ಯೆಯನ್ನು ಒಂದು ವಾರದೊಳಗೆ ಇತ್ಯರ್ಥಪಡಿಸುವಂತೆ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ್ ಅವರಿಗೆ ನಳಿನ್ ಸೂಚಿಸಿದರು. ಮುಂದಿನ 20 ದಿನದೊಳಗೆ ರೈಲ್ವೆ ಸಮಸ್ಯೆಗಳ ಕುರಿತು ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಶಾಸಕರು, ವಿಧಾನ ಸಭಾ ಪರಿಷತ್ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸುವರು. ಈ ವೇಳೆ ಅಧಿಕಾರಿಗಳು ರೈಲ್ವೆ ಸಮಸ್ಯೆ ಇರುವ ಎಲ್ಲಾ ರಸ್ತೆಗಳ ಸಮಗ್ರ ಮಾಹಿತಿಯೊಂದಿಗೆ ಹಾಜರಿರಬೇಕು ಎಂದು ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಅಪರ ಜಿಲ್ಲಾಕಾರಿ ಸದಾಶಿವ ಪ್ರಭು, ಪಾಲಿಕೆ ಜಂಟಿ ಆಯುಕ್ತ ಗೋಕುಲ್ದಾಸ್ ನಾಯಕ್, ರೈಲ್ವೇ ಅಧಿಕಾರಿಗಳಾದ ನಂದ ಪ್ರಕಾಶ್, ಬಿಂದು ಮುರುಳೀಧರನ್ ಈ ಸಂಧರ್ಭ್ದದಲ್ಲಿ ಉಪಸ್ಥಿತರಿದ್ದರು.