ಮೂಲ್ಕಿ,ಮೇ.18 : ಮೂಲ್ಕಿ ಬಳಿಯ ಅಂಗರಗುಡ್ಡೆ ರಾಮನಗರದ ಶ್ರೀ ರಾಮ ಭಜನಾ ಮಂಡಳಿಯ ಸಂಯೋಜನೆಯಲ್ಲಿ ನಡೆದ ನೇಪಾಲ ಸಂತ್ರಸ್ತರ ನೆರವಿಗಾಗಿ ಶ್ರೀ ರಾಮ ಟ್ರೋಫಿ ಕ್ರಿಕೇಟ್ ಪಂದ್ಯಾಟದಲ್ಲಿ ಸಂಗ್ರಹವಾದ 26 ಸಾವಿರದ ಐದು ನೂರು ರೂಪಾಯಿಯನ್ನು ಸಭಾ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ರವರಿಗೆ ಭಜನಾ ಮಂಡಳಿಯ ಪ್ರಮುಖರು ಹಸ್ತಾಂತರಿಸಿದರು.
ಸಮಾರಂಭದಲ್ಲಿ ಉಮಾನಾಥ ಕೋಟ್ಯಾನ್ ಮಾತನಾಡಿ ಕ್ರೀಡೆಯಿಂದಲೂ ಸಮಾಜಿಕ ಸೇವೆಯನ್ನು ಮಾಡಬಹುದು ಎಂಬುದಕ್ಕೆ ಇದೊಂದು ಉತ್ತಮ ಮಾದರಿ ಕಾರ್ಯಕ್ರಮ, ಇಂತಹ ಮನೋಭಾವನೆಯಿಂದ ಯುವ ಸಮುದಾಯವನ್ನು ಸಂಘಟಿಸುವ ಕ್ರೀಡೆಗೆ ಪರಿಸರದ ಸಹಕಾರವು ಮುಕ್ತವಾಗಿ ದೊರಕುತ್ತದೆ ಎಂದರು.
ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕೆರೆಕಾಡು ಬೆಳ್ಳಾಯರುವಿನ ಗೀತಾ ಆಚಾರ್ಯರಿಗೆ ಮನೆ ಕಟ್ಟಲು 5 ಸಾವಿರ ರೂ. ವಿಠಲ ಆಚಾರ್ಯರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 10 ಸಾವಿರ ರೂ. ನೆರವು ನೀಡಲಾಯಿತು. ವೀಕ್ಷಣೆ ವಿವರಣೆಗಾರ ಶ್ರೀಷ ಸರಾಫ್ ಐಕಳ ಹಾಗೂ ಆನಂದ ಗುಜರನ್ರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶ್ರೀ ರಾಮ ಟ್ರೋಫಿಯನ್ನು ಕೆ.ಎಸ್.ರಾವ್.ನಗರದ ನವಭಾರತ್ ತಂಡದವರು ಪಡೆದರೆ, ರನ್ನರ್ ಪ್ರಶಸ್ತಿಯನ್ನು ಮೂಲ್ಕಿ ಫ್ರೇಂಡ್ಸ್ ಪಡೆದುಕೊಂಡರು. ಉತ್ತಮ ದಾಂಡಿಗನಾಗಿ ಕಲಂದರ್, ಎಸೆತಗಾರನಾಗಿ ಶಾನ್, ಸರಣಿ ಮತ್ತು ಪಂದ್ಯ ಶ್ರೇಷ್ಟನಾಗಿ ದೀಪೇಶ್ ಆಚಾರ್ಯ ಬ್ರಹ್ಮಾವರ ವಯುಕ್ತಿಕ ಬಹುಮಾನ ಪಡೆದುಕೊಂಡರು.
ಉದ್ಯಮಿ ಕೆ.ಪಿ.ಜಗದೀಶ ಅಧಿಕಾರಿ, ಬಾಳಿಕೆ ಮನೆ ಬರ್ಕೆ ಅವಿನಾಶ್ ಶೆಟ್ಟಿ, ಸಮಾಜ ಸೇವಕ ಜಯರಾಮ ರಾವ್, ಸಾರ್ವಜನಿಕ ಹಿಂದು ರುದ್ರಭೂಮಿ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಶ್ರೀ ಮೂಕಾಂಬಿಕಾ ಸ್ವಸಹಾಯ ಸಂಘದ ಅಧ್ಯಕ್ಷ ಸತೀಶ್ ಕೆ.ಪಿ, ರಂಗನಟ ರಾಜೇಶ್ ಕೆಂಚನಕೆರೆ, ಬದ್ರಿಯಾ ಜುಮ್ಮಾ ಮಸಿದಿಯ ನಿಸಾರ್ ಅಹಮದ್, ಭಜನಾ ಮಂಡಳಿಯ ತಾರಾನಾಥ ದೇವಾಡಿಗ, ಜೀವನ್ ಶೆಟ್ಟಿ, ದಿನೇಶ್ ದಾಸ್, ಗಿರೀಶ್ ಸಾಲ್ಯಾನ್, ಸಂಪತ್ ಕುಮಾರ್, ರವಿಚಂದ್ರ ಇನ್ನಿತರರು ಉಪಸ್ಥಿತರಿದ್ದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
ವರದಿ ಕೃಪೆ : ನರೇಂದ್ರ ಕೆರೆಕಾಡ್