ಮಂಗಳೂರು : ಪಣಂಬೂರು ಸಮೀಪದ ಕೂಳೂರು – ತಣ್ಣೀರುಬಾವಿ ಐಒಸಿ ಪ್ಲಾಂಟ್ ಬಳಿ ಮಂಗಳವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ್ದ ಕಾರೊಂದು ನದಿಗೆ ಉರುಳಿ ಬಿದ್ದು ಕಾರಿನಲ್ಲಿದ್ದ ಯುವಕ ಹಾಗೂ ಯುವತಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತ ಯುವಕನನ್ನು ಬಂದರ್ನ ವ್ಯಾಪಾರಿ, ಫಳ್ನೀರ್ ನಿವಾಸಿ ಮಹಮ್ಮದ್ ರಫೀಕ್ ಅವರ ಪುತ್ರ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ತೌಶೀಲ್ (21) ಎಂದು ಸ್ಥಳದಲ್ಲಿ ದೊರಕಿದ ದಾಖಲೆಯ ಆಧಾರದಲ್ಲಿ ಗುರುತಿಸಲಾಗಿದೆ. ಜತೆಯಲ್ಲಿದ್ದ ಯುವತಿ ಕಾರವಾರದ ಪ್ರಿಣೀತಾ ಎಂದು ತಿಳಿದುಬಂದಿದೆ.
ಸಂಜೆಯ ವೇಳೆಗೆ ಇವರಿಬ್ಬರೂ ಹುಂಡೈ ಐ-20 ಕಾರಿನಲ್ಲಿ ತಣ್ಣೀರುಬಾವಿ ಬೀಚ್ನತ್ತ ತೆರಳುತ್ತಿದ್ದಾಗ ಎದುರಿನಲ್ಲಿ ಸಾಗುತ್ತಿದ್ದ ಇನ್ನೊಂದು ವಾಹನವನ್ನು (ಓವರ್ ಟೇಕ್ ) ಹಿಂದಿಕ್ಕುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಫುಟ್ಪಾತ್ ಮೇಲಿನಿಂದ ಹಾರಿ ಪೊದೆಯೊಳಗ್ಗೆ ನುಗ್ಗಿ ನದಿಗೆ ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ಸಮೀಪದಲ್ಲೇ ಇದ್ದ ಐಒಸಿ ಘಟಕದ ಕೆಲವು ಮಂದಿ ಈ ಅಪಘಾತವನ್ನು ಕಂಡು ಪೊಲೀಸರಿಗೆ ಕರೆ ಮಾಡಿ ತಿಳಿಸಿದರು. ತತ್ಕ್ಷಣ ಸ್ಥಳಕ್ಕೆ ಆಗಮಿಸಿದ ಪಣಂಬೂರು ಪೊಲೀಸರು, ಅಗ್ನಿಶಾಮಕ ದಳ, ಹೊಯಿಗೆ ತೆಗೆಯುವ ಕಾರ್ಮಿಕರು ಹಾಗೂ ಸ್ಥಳೀಯರ ಸಹಾಯದೊಂದಿಗೆ ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಒಂದೂವರೆ ಅಡಿ ಎತ್ತರದ ಫುಟ್ಪಾತ್ನ್ನೂ ಮೀರಿ ಎತ್ತರಕ್ಕೆ ಹಾರಿದ್ದ ಕಾರು ನೇರವಾಗಿ ನದಿಗೆ ಉರುಳಿ ಬಿದ್ದಿದೆ. ಸಾಧಾರಣವಾಗಿ ಪಾದಚಾರಿಗಳ ಅನುಕೂಲಕ್ಕಾಗಿ ಈ ಎತ್ತರದ ಫುಟ್ಪಾತ್ ನಿರ್ಮಿಸಲಾಗಿದೆ. ಚಿಕ್ಕಪುಟ್ಟ ಅಪಘಾತ ನಡೆದರೆ ಈ ಫುಟ್ಪಾತ್ ರಕ್ಷಣಾ ಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
ಅಪಘಾತ ಸಂಭವಿಸಿದ ಸ್ಥಳದಲ್ಲಿ ದೊಡ್ಡ ಗಾತ್ರದ ಮರ ಇತ್ತು. ಇದು ಕಾರು ನದಿಗೆ ಬೀಳದಂತೆ ತಡೆದಿದ್ದರೆ ಬಹುಶ ಇಬ್ಬರು ಯುವ ಜೀವಗಳು ಉಳಿಯುತ್ತಿದ್ದವು. ಆದರೆ ಹಾಗಾಗಲಿಲ್ಲ ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬಂತೆ ಎತ್ತರದ ದಂಡೆ, ಮರಗಳನ್ನು ದಾಟಿ ನೇರವಾಗಿ ಕಾರು ಫಲ್ಗುಣಿಯ ನದಿಗೆ ಬಿದ್ದಿದೆ.
ಸೆಂಟ್ರಲ್ ಲಾಕ್ನಿಂದ ಕಾರಿನಲ್ಲಿದ್ದವರು ಒಳಗೆ ಲಾಕ್..
ಸಾಧಾರಣವಾಗಿ ಅಪಘಾತ ಸಂಭವಿಸುವಾಗ ವಾಹನದ ಬಾಗಿಲುಗಳು ತೆರೆದುಕೊಳ್ಳುವುದು ಸಾಮಾನ್ಯ. ಆದರೆ ಆಧುನಿಕ ಕಾರುಗಳಲ್ಲಿ ಇದೀಗ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ಗಳು ಕೆಲವು ಬಾರಿ ಜೀವ ತೆಗೆಯುತ್ತವೆ ಎಂಬುದಕ್ಕೆ ಈ ಅಪಘಾತ ಉದಾಹರಣೆ. ಇಷ್ಟು ಅಪಘಾತವಾದರೂ ಕಾರಿನ ಬಾಗಿಲುಗಳು ಯಥಾ ಸ್ಥಿತಿಯಲ್ಲಿದ್ದವು. ರಕ್ಷಣೆಗಾಗಿ ಕಾರಿನ ಗಾಜು ಒಡೆದು ಇಬ್ಬರನ್ನೂ ಮೇಲಕ್ಕೆ ಎತ್ತಬೇಕಾಯಿತು.