ಕನ್ನಡ ವಾರ್ತೆಗಳು

ವೈದ್ಯಕೀಯ ವಿದ್ಯಾರ್ಥಿನಿಗೆ ಕಿರುಕುಳ : ಅಸ್ಸಾಂ ಮೂಲದ ಯುವಕ ಸೆರೆ – ವಿದ್ಯಾರ್ಥಿನಿಯ ಸ್ನೇಹಿತನಿಗೆ ನ್ಯಾಯಾಂಗ ಬಂಧನ

Pinterest LinkedIn Tumblr

arrest

ಮಂಗಳೂರು,ಮೇ.04 : ನಗರದ ಜ್ಯೋತಿ ವೃತ್ತದ ಬಳಿ ವೈದ್ಯಕೀಯ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅಸ್ಸಾಂ ಮೂಲದ ಯುವಕ ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆತನನ್ನು ಬೆನ್ನಟ್ಟಿದ್ದ ಯುವತಿಯ ಸ್ನೇಹಿತ ಕೂಡಾ ಪೊಲೀಸರೊಂದಿಗೆ ಹೊಡೆಡಾಟ ನಡೆಸಿದ ಆರೋಪದಲ್ಲಿ ಅತನನ್ನು ಕೂಡ ಬಂಧಿಸಿದಲಾಗಿದೆ.

ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ. ಜ್ಯೋತಿ ವೃತ್ತದ ಬಳಿಯ ಲಿಕ್ವಿಡ್ ಲಾಂಜ್ ಬಳಿ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ನಿಂತುಕೊಂಡಿದ್ದು, ಇದನ್ನು ಗಮನಿಸಿದ ಅಲ್ಲಿಯೇ ಸುಳಿದಾಡುತ್ತಿದ್ದ ಅಸ್ಸಾಂ ಮೂಲದ ಸಂಜಯ ದಾಸ್ (23) ಆಕೆಯ ಮೈಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಅಲ್ಲಿಂದ ಪರಾರಿಯಾದಾಗ ವಿದ್ಯಾರ್ಥಿನಿಯ ಸ್ನೇಹಿತ ಪದವು ಕಲ್ಪನೆ ನಿವಾಸಿ ಹರ್ಷಿಲ್ ಶೆಟ್ಟಿ (23) ಆತನನ್ನು ಬೆನ್ನಟ್ಟಿದ್ದರು. ಸಂಜಯ ದಾಸ್ ತಾನು ಕೆಲಸ ಮಾಡುತ್ತಿರುವ ಬಾವುಟ ಗುಡ್ಡೆಯ ಫಾಸ್ಟ್ ಫುಡ್ ಶಾಪ್ ಗೆ ನುಗ್ಗಿ ಅಲ್ಲಿ ಬಚ್ಚಿಟ್ಟುಕೊಂಡಿದ್ದ. ಹರ್ಷಿಲ್ ಆತನನ್ನು ಹಿಡಿಯಲು ಮುಂದಾದಾಗ ಅಂಗಡಿ ಮಾಲಕ ಆಕ್ಷೇಪಿಸಿದ್ದು, ಅವರ ನಡುವೆ ಜಗಳ ನಡೆದಿತ್ತು. ದಾಸ್ ನನ್ನು ತನ್ನ ವಶಕ್ಕೊಪ್ಪಿಸುವಂತೆ ಆಗ್ರಹಿಸಿ ಹರ್ಷಿಲ್ ಅಂಗಡಿ ಮಾಲಕನೊಂದಿಗೆ ಸಂಘರ್ಷಕ್ಕೆ ಮುಂದಾಗಿದ್ದು, ಅದೇ ವೇಳೆ ಅಲ್ಲಿಗೆ ಆಗಮಿಸಿದ ಬಂದರು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಜಗಳ ನಿಲ್ಲಿಸುವಂತೆ ಹರ್ಷಿಲ್ ಗೆ ಸೂಚಿಸಿದ್ದರು. ಆದರೆ ಇದಕ್ಕೆ ಪೊಲೀಸರ ಅಗತ್ಯವಿಲ್ಲ. ನಾನೇ ಆರೋಪಿಯನ್ನು ನೋಡಿಕೊಳ್ಳುತ್ತೇನೆ ಎಂದು ಮುನ್ನುಗ್ಗಿದ್ದ ಹರ್ಷಲ್ ತನ್ನನ್ನು ತಡೆಯಲು ಬಂದಿದ್ದ ಮೂವರು ಪೊಲೀಸರನ್ನು ಎಳೆದಾಡಿದ್ದ.

ಸಂಜಯದಾಸ್ ನನ್ನು ಬಂಧಿಸಿದ ಪೊಲೀಸರು ತಮ್ಮೊಡನೆ ಅನುಚಿತವಾಗಿ ನಡೆದುಕೊಂಡಿದ್ದ ಹರ್ಷಿಲ್ ಶೆಟ್ಟಿಯನ್ನೂ ಬಂಧಿಸಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment