ಉಡುಪಿ : ಅನೈತಿಕ ಸಂಬಂಧ ಕಲ್ಪಿಸಿ ಪತ್ನಿಯೊಂದಿಗೆ ನಿತ್ಯ ಜಗಳವಾಡುತ್ತಿದ್ದ ವ್ಯಕ್ತಿಯೋರ್ವ ಕುದಿದ ಮತ್ತಿನಲ್ಲಿ ಹೆಂಡತಿಯೊಂದಿಗೆ ಜಗಳಕ್ಕಿಳಿದು ಹೆಂಡತಿ ಹಾಗೂ ಆಕೆಯ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉಡುಪಿಯ ಅಲೆವೂರು ಸಮೀಪದ ಚಿಟ್ಪಾಡಿ ಕಸ್ತುರ್ಬಾ ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಅಸ್ಸಾಂ ಮೂಲದ ಸಂಜಯ್ (30) ಎಂಬಾತನೇ ಈ ಕ್ರತ್ಯವೆಸಗಿದ್ದ ಆರೋಪಿಯಾಗಿದ್ದು. ತನ್ನ ಪತ್ನಿ ಅರ್ಚನಾ (23) ಹಾಗೂ ಆಕೆಯ ತಾಯಿ ನಿರ್ಮಲಾ (52) ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಕೊಲೆಗೈದ ಆರೋಪಿ ಅಸ್ಸಾಂ ಮೂಲದವನಾಗಿದ್ದು, ಮಂಗಳೂರಿನಲ್ಲಿ ಯಾವುದೇ ಕಂಪೆನಿಯಲ್ಲಿ ಕಾರ್ಮಿಕನಾಗಿದ್ದ. ಸಂಜಯ್ ಕುಮಾರ್ ಚಿಟ್ಪಾಡಿಯ ಅರ್ಚನಾಳನ್ನು ಪ್ರೀತಿಸಿ ವಿವಾಹವಾಗಿದ್ದ . ವಿವಾಹದ ಬಳಿಕ ಪತ್ನಿಯ ನಡತೆ ಬಗ್ಗೆ ಸಂಶಯ ಹೊಂದಿದ್ದ ಆತ ನಿತ್ಯ ಇದೇ ವಿಚಾರದಲ್ಲಿ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ.
ಗುರುವಾರ ರಾತ್ರಿ ಸುಮಾರು 1.40 ರ ಹೊತ್ತಿಗೆ ಪಾನಮತ್ತನಾಗಿ ಬಂದ ಸಂಜಯ್ ಅರ್ಚನಾ ಜೊತೆ ಜಗಳಕ್ಕಿಳಿದಿದ್ದಾನೆ. ಈ ವೇಳೆ ಕುಪಿತನಾದ ಸಂಜಯ್ ಇಬ್ಬರ ಮೇಲೂ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಅರ್ಚನಾ ತಾಯಿ ನಿರ್ಮಲಾ ಸ್ಥಳದಲ್ಲೇ ಸಾವನ್ನಪ್ಪಿದ್ದು,ಅರ್ಚನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಪ್ರಕರಣ ದಾಖಲಿಸಿರುವ ಉಡುಪಿ ನಗರ ಠಾಣಾ ಪೊಲೀಸರು ಆರೋಪಿ ಸಂಜಯ್ನನ್ನು ಬಂಧಿಸಿದ್ದಾರೆ.