ಉಳ್ಳಾಲ,ಎಪ್ರಿಲ್.28 : ಧರ್ಮಯುಕ್ತವಾಗಿ ಬದುಕಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಸಾದ್ವಿ ಶ್ರೀ ಮಾತಾನಂದಮಯಿ ಹೇಳಿದ್ದಾರೆ. ಅವರು ಕೊಣಾಜೆ ಅಸೈಗೋಳಿಯ ಶ್ರೀ ಅಯ್ಯಪ್ಪಸ್ವಾಮಿ ಮಂದಿರ ಇದರ ಭಾನುವಾರ ನಡೆದ ನೂತನ ಮಂದಿರದ ಶಿಲಾನ್ಯಾಸ ನೆರವೇರಿಸಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಯ್ಯಪ್ಪ ಎಂದರೆ ಶ್ರೇಷ್ಟ ಎಂಬುದು ಅರ್ಥ. ಇಂತಹ ದೇವರ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಜನತೆಯ ಕಾರ್ಯ ಶ್ಲಾಘನೀಯ ಎಂದ ಅವರು ಮಂದಿರಗಳ ನಿರ್ಮಾಣದಿಂದ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಆಗಬೇಕಿದೆ. ಬದುಕಿನಲ್ಲಿ ಜೀವನ ಸಾರ್ಥಕವಾಗಬೇಕಾದರೆ ಧರ್ಮ ಪಾಲನೆಯಿಂದ ಮಾತ್ರ ಸಾಧ್ಯ ಎಂದರು.
ತಲಪಾಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಯಮಿ ರಮಾನಾಥ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಅಧ್ಯಕ್ಷ ಸೀತಾರಾಮ ಶೆಟ್ಟಿ ದಡಸು ನೆತ್ತಿಲಬಾಳಿಕೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿ ವಿಶ್ವನಾಥ ಕಾಯರ್ಪಳಿಕೆ, ಅಸೈಗೋಳಿ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪಟ್ಟೋರಿ,ಪುಲ್ಲು, ಕೆ.ಡಿ.ಪಿ ಸದಸ್ಯ ಆಲ್ವಿನ್ ಡಿಸೋಜಾ, ಗೌರವಾಧ್ಯಕ್ಷರುಗಳಾದ ಸುರೇಶ್ ಚೌಟ ಕಕ್ಕೆಮಜಲು, ಪ್ರಶಾಂತ್ ಕಾಜವ ಮಿತ್ತಕೋಡಿ, ಕಾರ್ಯಾಧ್ಯಕ್ಷ ವಿಶ್ವನಾಥ ನಾಯ್ಕ್ ಉಪಸ್ಥಿತರಿದ್ದರು.
ಆನಂದ ಕೆ.ಅಸೈಗೋಳಿ ಸ್ವಾಗತಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ಪಟ್ಟೋರಿ ವಂದಿಸಿದರು.