ಮಂಗಳೂರು, ಎ:25: ರಾಜ್ಯ ಸರಕಾರವು ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಜಾತಿ ಜನಗಣತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿಯೊಂದು ಜಾತಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಉದ್ಯೋಗ ಸಹಿತ ಎಲ್ಲಾ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶ ಇದರಲ್ಲಿದೆ. ಈ ಬಗ್ಗೆ ಟೀಕೆಗಳು ಕೇಳಿ ಬಂದರೂ ಯಾವ ಕಾರಣಕ್ಕೂ ಇದರಿಂದ ಹಿಂಜರಿಯದೆ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಕಟಿಬದ್ಧನಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತೊಕ್ಕೊಟು ಸಮೀಪದ ಕುತ್ತಾರು ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ತಾನು ಜಾತಿಯನ್ನು ವಿಂಗಡಿಸಲು ಈ ಸಮೀಕ್ಷೆಯನ್ನು ಮಾಡುತ್ತಿಲ್ಲ. ಜಾತಿ, ಉಪಜಾತಿಗಳಿಗೆ ನ್ಯಾಯಬದ್ಧ ಹಕ್ಕುಗಳನ್ನು ನೀಡುವುದಕ್ಕಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇನೆ. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಉದ್ದೇಶ ಇದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ಯು.ಟಿ.ಖಾದರ್, ವಿನಯಕುಮಾರ್ ಸೊರಕೆ, ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕರಾದ ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವ, ಐವನ್ ಡಿಸೋಜ ಉಪಸ್ಥಿತರಿದ್ದರು. ದೇವಳದ ಅಧ್ಯಕ್ಷ ಚಂದ್ರಹಾಸ ಕೊಟ್ಟಾರಿ ಈ ಸಂದರ್ಭದಲ್ಲಿ ಮನವಿ ಅರ್ಪಿಸಿದರು.