ಕನ್ನಡ ವಾರ್ತೆಗಳು

ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದೇ ನನ್ನ ಕನಸು : ಉಳ್ಳಾಲ ಉರೂಸ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

CM_Visit_ullala_1

ಮಂಗಳೂರು / ಉಳ್ಳಾಲ : ಕರ್ನಾಟಕ ರಾಜ್ಯ ಹಸಿವು ಮುಕ್ತ ರಾಜ್ಯವಾಗಬೇಕು. ಇದಕ್ಕಾಗಿಯೇ ಜನತೆಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಅಕ್ಕಿ ಮತ್ತು ಗೋಧಿ ವಿತರಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ನಡೆಯುತ್ತಿರುವ 423ನೇ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಪ್ರಯಕ್ತ ಶುಕ್ರವಾರ ನಡೆದ ರಾಜಕೀಯ ಹಾಗೂ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಧರ್ಮದವರಿಗೂ ಹಸಿವು ಇರುತ್ತದೆ. ಅದಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅರ್ಧ ಗಂಟೆಯೊಳಗೆ ಬಿಪಿಲ್ ಕಾರ್ಡುದಾರರಿಗೆ ತಿಂಗಳೊಂದಕ್ಕೆ ಒಂದು ರೂ. ವಿನಂತೆ 30 ಕೆ. ಜಿ. ಅಕ್ಕಿ ಕೊಡಲು ಮುಂದಾದೆ. ಅಷ್ಟಕ್ಕೂ ತೃಪ್ತನಾಗದೆ ಮೇ 1ರಿಂದ ಅವರಿಂದ ಒಂದು ರೂ. ವನ್ನೂ ಪಡೆದುಕೊಳೊಲ್ಲ. ಎಪಿಎಲ್ ಕಾರ್ಡುದಾರರಿಗೆ ರಿಯಾಯಿತಿ ದರದಲ್ಲಿ ಅಕ್ಕಿ ಮತ್ತು ಗೋಧಿ ವಿತರಿಸಲಿದ್ದೇವೆ. ಒಟ್ಟಿನಲ್ಲಿ ಎಲ್ಲ ಬಡವರ ಹಸಿವು ನೀಗಬೇಕು. ಆ ಮೂಲಕ ಕರ್ನಾಟಕ ರಾಜ್ಯ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದೇ ನನ್ನ ಕನಸು ಎಂದು ಹೇಳಿದರು.

CM_Visit_ullala_2 CM_Visit_ullala_3

ನಮ್ಮಲ್ಲಿ ಅನೇಕ ಧರ್ಮಗಳಿಗೆ. ನಮ್ಮ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದಂತೆ ಯಾವುದೇ ಒಂದು ಧರ್ಮದ ತಳಹದಿಯ ಮೇಲೆ ಬದುಕಲು ಸಾಧ್ಯವಿಲ್ಲ. ಎಲ್ಲ ಧರ್ಮವೂ ಸಮಾನ. ಎಲ್ಲ ಧರ್ಮಗಳು ಕೂಡಾ ಮನುಕುಲದ ಹಿತ, ಉದ್ಧಾರ ಬಯಸುತ್ತದೆ. ಎಲ್ಲ ಧರ್ಮದ ಮೂಲ ಉದ್ದೇಶ ಮನುಕುಲದ ಉದ್ಧಾರ ಎಂದರು.

ನಾನು ಕರ್ನಾಟಕದ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಆಗಿದ್ದೇನೆ. ಯಾವುದೇ ವರ್ಗಕ್ಕೆ ಸೀಮಿತನಾಗಿಲ್ಲ. ಆರೂವರೆ ಕೋಟಿ ಜನರ ಹಿತ, ಆಸ್ತಿ, ಮಾನ, ಪ್ರಾಣ ಕಾಪಾಡಬೇಕಾದದ್ದು ನಮ್ಮ ಜವಬ್ದಾರಿ. ಅಲ್ಲಾಹು, ಈಶ್ವರ, ಏಸುಕ್ರಿಸ್ತ ಅದನ್ನೇ ಬಯಸುವುದು. ಸಮಾಜದಲ್ಲಿ ಅಂತರ ಬಯಸಲು ಸಾಧ್ಯವಿಲ್ಲ ಎಂದು ನುಡಿದರು.

ಮತಾಂಧ ಶಕ್ತಿಗಳು ಸಮಾಜವನ್ನು ಹಾಳು ಮಾಡಲು ಪ್ರಯತ್ನಿಸಿದರೆ ಅಂತಹ ಪ್ರಯತ್ನಕ್ಕೆ ತಡೆ ಒಡ್ಡಬೇಕು. ನನಗೆ ಕಾಯಿಲೆ ಬಂದು ಅಪರೇಶನ್ ಮಾಡುವ ಅನಿವಾರ್ಯತೆ ಇದ್ದಾಗ ಬದುಕಲಿಕ್ಕೋಸ್ಕರ ಯಾರ ರಕ್ತವೂ ಆಗಬಹುದು. ಆದರೆ ಬದುಕಿದ ಮೇಲೆ ಜನರನ್ನು ವಿಂಗಡಿಸುವುದು ಅಮಾನವೀಯವಾದುದು ಎಂದು ಸಾರಿದರು.

CM_Visit_ullala_4 CM_Visit_ullala_5 CM_Visit_ullala_6

ಯೋಜನಾ ಆಯೋಗ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ದರ್ಗಾದ ಡಾಕ್ಯುಮೆಂಟರಿ ಸಿಡಿ ಬಿಡುಗಡೆಗೊಳಿಸಿದರು. ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಖಮರುಲ್ ಇಸ್ಲಾಂ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ನಗರಾಭಿವದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಉತ್ತರ ಕ್ಷೇತ್ರ ಶಾಸಕ ಬಿ.ಎ. ಮೊಯ್ದಿನ್ ಬಾವಾ, ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಅಸ್ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಕೊಲಾಂಡಿ, ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಎಂ. ಮಸೂದ್, ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಜಿಲಾನಿ, ಸೆಬೆಅಬ್ದುಲ್ ರಶೀದ್ ಝೈನಿ, ಮಹಮ್ಮದ್ ಯೂಸುಫ್, ಮಜೀದ್ ಹಾಜಿ ಉಚ್ಚಿಲ, ಸೆಬೆಸ್ಟಿಯನ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಜೆಡಿಎಸ್ ಮುಖಂಡ ಗುಲಾಂ ಮಹಮ್ಮದ್, ಕಾಂಗ್ರೆಸ್ ಮುಖಂಡ ಬಿ.ಎಚ್.ಖಾದರ್, ಎಂ.ಎಸ್.ಮಹಮ್ಮದ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಎನ್.ಕೆ.ಎಂ.ಶಾಫಿ ಸಅದಿ, ನಿವತ್ತ ಡಿಸಿಪಿ ಜಿ.ಎ.ಬಾವಾ, ಉಳ್ಳಾಲ ನಗರಸಭೆಯ ಅಧ್ಯಕ್ಷೆ ಗಿರಿಜಾ ಎಂ.ಬಾ, ನಗರ ಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಕೌನ್ಸಿಲರ್ ಮಹಾಲಕ್ಷ್ಮಿ, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹನೀಫ್ ಹಾಜಿ, ನಾಝಿಮ್ ಮುಕ್ಕಚ್ಚೇರಿ, ಹಮೀದ್ ಕಲ್ಲಾಪು, ಝಿಯಾದ್ ತಂಙಳ್, ತಂಝಿಲ್, ಫಾರೂಕ್ ಮಾರ್ಗತ್ತಲೆ ಸೇರಿದಂತೆ ದರ್ಗಾ ಸಮಿತಿ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.

ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಅಶೈಖ್ ಸ್ವಬಹುದ್ದಿನ್ ರಿಫಾಯೀ ಅಲ್ ಬಗ್ದ್ದಾದಿ ದುಆ ಆಶೀರ್ವಚನಗೈದರು. ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು.

ಸಂಸ್ಥೆಯ ವಿದ್ಯಾರ್ಥಿ ಮಾ. ಶಮಾಸ್ ಸ್ವಾಗತ ಗೀತೆ ಹಾಡಿದರು. ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳೆಕೋಟೆ ಉರ್ದು ಹಿ.ಪ್ರಾ.ಶಾ. ಮುಖ್ಯ ಶಿಕ್ಷಕಕೆ.ಎಂ.ಕೆ. ಮಂಜನಾಡಿ ಹಾಗೂ ಆರ್.ಕೆ.ಮದನಿ ಕಾರ್ಯಕ್ರಮ ನಿರೂಪಿಸಿದರು.

Write A Comment