ಉಳ್ಳಾಲ: ಧಾರ್ಮಿಕ ರಂಗದ ಚೌಕಟ್ಟು ಮೀರದಂತೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲು, ಸಮಸ್ಯೆಗಳ ಪರಿಹಾರಕ್ಕೆ ಮತ್ತು ಕೆಲವು ಸೃಷ್ಟಿಯಾಗುವ ಗೊಂದಲಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಖಾಝಿಯವರ ಅಗತ್ಯತೆ ಇದೆ. ಖಾಝಿ ಸ್ಥಾನ ಅಲಂಕಿಸುವವರಿಗೆ ಜವಾಬ್ದಾರಿ ಹೆಚ್ಚಿದೆ. ಮಸೀದಿಯ ಆಡಳಿತದ ಬಗ್ಗೆ ಒಂದು ಹಿಡಿತ ಖಾಝಿಯವರ ಕೈಯಲ್ಲಿರುತ್ತದೆ. ಎಂದು ಕಾಂಞಗಾಂಡ್ ಖಾಝಿ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಅವರು ಕುಂಡೂರು ಕೇಂದ್ರ ಮಸೀದಿಯಲ್ಲಿ ಜರಗಿದ ಕುಂಡುರು, ಮಜಲ್ತೋಟ, ಎಲಿಯಾರ್ ಮಸೀದಿಗಳ ಸಂಯುಕ್ತ ಖಾಝಿಯಾಗಿ ಭಾನುವಾರ ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಖಾಝಿ ಸ್ಥಾನ ಸ್ವೀಕರಿಸಿ ಮಾತನಾಡಿದ ತ್ವಾಕಾ ಅಹ್ಮದ್ಮುಸ್ಲಿಯಾರ್ರವರು, ದ.ಕ. ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನನಗೆ ಇದೊಂದು ಹೊರೆಯಾಗದು. ಇಲ್ಲಿ ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆಯೋ ಅದನ್ನು ಜವಾಬ್ದಾರಿಯುತವಾಗಿ ನಿಬಾಯಿಸುವ ಕೆಲಸ ನನ್ನದು. ಯಾಕೆಂದರೆ ಇದು ಭರವಸೆ ಕೊಡುವಂತಹ ರಾಜಕೀಯ ಕಾರ್ಯವಲ್ಲ. ಇಸ್ಲಾಂ ಧರ್ಮವನ್ನು ಅಭಿವೃದ್ಧಿಪಡಿಸಲು ಮತ್ತು ಮುಸ್ಲಿಂ ಸಮುದಾಯದಲ್ಲಿ ತಿಳುವಳಿಕೆಯ ಕೊರತೆ ಇರುವವರಿಗೆ ಇಸ್ಲಾಂನ ಸಂದೇಶಗಳನ್ನು ತಲುಪಿಸಲು ಇರುವ ಸ್ಥಾನವಾಗಿದೆ. ಪರಲೋಕದ ರಕ್ಷಣೆಗೆ ಇರುವ ಹಾದಿಯಲ್ಲಿ ಇದೂ ಕೂಡಾ ಒಂದು. ಅದನ್ನು ನಿಬಾಯಿಸಲೇಬೇಕಾಗುತ್ತದೆ ಎಂದರು.
ಮೊಹಮ್ಮದ್ ಶರೀಫ್ ಖಾಝಿ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಿತ್ತಬೈಲ್ ಜಬ್ಬಾರ್ ಉಸ್ತಾದ್, ಸಚಿವ ಯು.ಟಿ. ಖಾದರ್, ಜಿ.ಪಂ. ಸದಸ್ಯ ಎನ್.ಎಸ್.ಕರೀಂ, ಫಾರೂಕ್ ಉಳ್ಳಾಲ್, ನಝೀರ್ ಉಳ್ಳಾಲ್ ಮೊದಲಾದವರು ಎಲಿಯಾರ್ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹೀಂ ಹಾಜಿ ಬಂಡಾರೆ ಪಾದೆ, ಮಜಲ್ತೋಟ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್, ಮಾಜಿ ಅಧ್ಯಕ್ಷರುಗಳಾದ ಡಾ. ಸುಲೈಮಾನ್, ಝುಬೈರ್, ಮಾಜಿ ಮೇಯರ್ ಆಶ್ರಫ್, ಖಾಸಿಂ ದಾರಿಮಿ ಕಿನ್ಯ, ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಲತೀಫ್ ದಾರಿಮಿ, ಇಬ್ರಾಹೀಂ ಕೋಣಾಜೆ, ಸೈದಾಲಿ ದೇರಳಕಟ್ಟೆ, ಶರೀಫ್ ದಾರಿಮಿ, ಅಬ್ದುಲ್ರಹ್ಮಾನ್ ದಾರಿಮಿ, ಉಪಸ್ಥಿತರಿದ್ದರು. ಖತೀಬ್ ಅಬುಸ್ವಾಲಿ ಫೈಝಿ ಸ್ವಾಗತಿಸಿದರು.
_M.Arif Kalkatta