ಮಂಗಳೂರು, ಎ.17: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮನ ರಸ್ತೆಯ ಎಲ್ಲಾ ಕಾಮಗಾರಿಗಳು ಮೇ ಅಂತ್ಯದೊಳಗೆ ಮುಗಿಯಲಿದ್ದು, ಜೂನ್ನಲ್ಲಿ ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.
ಅವರು ಗುರುವಾರ ಈ ಸಂಬಂಧ ತಮ್ಮ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಕೆ.ಆರ್. ಡಿ.ಸಿ.ಎಲ್. ಮೂಲಕ ಈ ರಸ್ತೆ ಕಾಮಗಾರಿ ನಡೆಯುತ್ತಿದೆ. ಒಟ್ಟು 1,125 ಮೀ. ರಸ್ತೆಯಲ್ಲಿ 740 ಮೀ. ಕಾಂಕ್ರಿಟ್ ಹಾಗೂ ಉಳಿದ ಭಾಗ ಡಾಮರು ಹಾಕಲಾಗುವುದು. ರಸ್ತೆಯ ಒಂದು ಪಾರ್ಶ್ವದಲ್ಲಿ ತಡೆಗೋಡೆ ನಿರ್ಮಾಣವಾಗಲಿದೆ. ನೂತನ ರಸ್ತೆ ಯಲ್ಲಿ ಹಾಲಿ ಇರುವ ವಿದ್ಯುತ್ ಕಂಬಗಳನ್ನು ಹಾಗೂ ಕುಡಿಯುವ ನೀರಿನ ಪೈಪ್ಗಳನ್ನು ಸ್ಥಳಾಂತರಿಸಲು ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸ ಲಾಗಿದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣಕ್ಕೆ ಈಗಿನ ಹೋ ಗುವ ಮತ್ತು ನೂತನ ನಿರ್ಗಮನ ರಸ್ತೆ ಯಲ್ಲದೆ, ತುರ್ತು ಸಂದರ್ಭದಲ್ಲಿ ಬಳಕೆಗಾಗಿ ಪರ್ಯಾಯ ರಸ್ತೆ ಸುಮಾರು 1.90 ಕೋ.ರೂ. ವೆಚ್ಚ ದಲ್ಲಿ ನಿರ್ಮಾಣವಾಗಲಿದೆ. ಮರವೂರು ಗ್ರಾಪಂನಿಂದ ವಿಮಾನ ನಿಲ್ದಾಣದ ವರೆಗೆ ಈ ರಸ್ತೆ ಹಾದುಹೋಗಲಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆ ಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ನೂತನ ವಿಮಾನ ನಿಲ್ದಾಣಕ್ಕೆ ಮಳವೂರು, ಅದ್ಯಪಾಡಿ, ಕೊಳಂಬೆ ಮತ್ತು ಕೆಂಜಾರು ಗ್ರಾಮಗಳ ಒಟ್ಟು 422 ಎಕರೆ ಭೂಸ್ವಾಧೀನ ಮಾಡಲಾಗಿತ್ತು. ಇವುಗಳಲ್ಲಿ ಹೆಚ್ಚಿನ ಪರಿಹಾರಕ್ಕಾಗಿ 153 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿತ್ತು. ಈ ಪೈಕಿ 79 ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ನೀಡಲು ನ್ಯಾಯಾಲಯ ದಿಂದ ಆದೇಶವಾಗಿದೆ. ಈ ಪೈಕಿ ಕೆಲವು ಆದೇಶಗಳ ವಿರುದ್ಧ ಮೇಲ್ಮ ನವಿ ಸಲ್ಲಿಸಲು ಕಾನೂನು ಇಲಾಖೆ ಸೂಚಿಸಿದೆ ಎಂದು ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೆಲವೊಂದು ಪ್ರಕರಣಗಳಿಗೆ ಮಾತ್ರ ಮೇಲ್ಮನವಿ ಸಲ್ಲಿಸುವುದು ಸೂಕ್ತವಲ್ಲ. ಒಂದೋ ಎಲ್ಲಾ ಆದೇಶಗಳಿಗೆ ಮೇಲ್ಮನವಿ ಸಲ್ಲಿಸಬೇಕು. ಇಲ್ಲವೇ ಯಾವ ಪ್ರಕರಣಕ್ಕೂ ಮೇಲ್ಮನವಿ ಸಲ್ಲಿಸಬಾರದು. ಈ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕೆ.ಆರ್.ಡಿ.ಸಿ.ಎಲ್. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಬ್ದುಲ್ ಸುಬಾನ್, ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ರಾಧಾಕೃಷ್ಣ, ಪುತ್ತೂರು ಉಪಭಾಗಾಧಿಕಾರಿ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
ಮಾಣಿ- ಮೈಸೂರು ರಸ್ತೆ ಕಾಮಗಾರಿ ಶೀಘ್ರ ಮುಗಿಸಲು ಸೂಚನೆ
ಇದೇ ಸಂದರ್ಭದಲ್ಲಿ ಮಾಣಿ-ಮೈಸೂರು ರಸ್ತೆಯ ಪ್ರಗತಿ ಪರಿಶೀ ಲನೆ ನಡೆಸಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೆ.ಆರ್. ಡಿ.ಸಿ.ಎಲ್. ಅಧಿಕಾರಿಗಳಿಗೆ ಸೂಚಿಸಿದರು.
ಜಾಲ್ಸೂರು-ಪೈಚಾರು ಮಧ್ಯೆ ಟ್ರಕ್ ಬೇ ನಿರ್ಮಾಣ, ಕಲ್ಲುಗುಂಡಿ ಸೇತುವೆ, ಮಾಣಿ ಜಂಕ್ಷನ್ ಅಭಿವೃದ್ಧಿ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಹೆದ್ದಾರಿಯಲ್ಲಿ ಅಗತ್ಯವಿರುವಲ್ಲಿ ತಡೆ ಗೋಡೆ, ಝೀಬ್ರಾ ಕ್ರಾಸಿಂಗ್, ಬಸ್ ಬೇ ನಿರ್ಮಾಣಗಳನ್ನು ಆದಷ್ಟು ಬೇಗನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಈಗಿನ ರನ್ವೇಯನ್ನು 8,000 ಅಡಿ ಯಿಂದ 13,000 ಅಡಿಯವರೆಗೆ ವಿಸ್ತರಣೆಗೆ 84 ಎಕರೆ ಜಮೀನು ಅಗತ್ಯವಿದೆ. ಈ ಪೈಕಿ 23 ಎಕರೆ ಜಮೀನು ಈಗಾಗಲೇ ಸರಕಾರದ ಸ್ವಾಧೀನ ದಲ್ಲಿದೆ. ಉಳಿದ 61 ಎಕರೆ ಭೂಸ್ವಾಧೀನಕ್ಕೆ ಈಗಾ ಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಇದಕ್ಕೆ ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ದೊರ ಕಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳು ಮಾಹಿತಿ ನೀಡಿದರು.