ಮಂಗಳೂರು,ಏಪ್ರಿಲ್.09: ‘ಕೊಂಕಣಿಗರಾದ ನಾವು ನಮ್ಮ ಮಾತಭಾಷೆ ಕೊಂಕಣಿಯನ್ನು ಮಾತನಾಡಲು, ಬರೆಯಲು ಹಿಂಜರಿಯಬಾರದು. ಜಾತಿ ಗಣತಿಯಲ್ಲಿ ಭಾಷೆಯ ಬಗ್ಗೆ ಕೊಂಕಣಿಯನ್ನೇ ಉಲ್ಲೇಖಿಸಬೇಕು ಎಂದು ಮಂಗಳೂರು ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಹೇಳಿದರು. ಅವರು ನಗರದ ಸಿಒಡಿಪಿ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕೊಂಕಣಿ ಶಿಕ್ಷಕರ ವಾರ್ಷಿಕ ಸಮಾವೇಶದ ಮುಖ್ಯ ಅತಿಥಿಯಾಗಿದ್ದರು.
ಮಾಂಡ್ ಸೊಭಾಣ್ ಪ್ರಾಯೋಜಿತ ‘ದಿ. ಜೆಸ್ಸಿ ಕ್ಯಾಸ್ತೆಲಿನೊ ಸ್ಮಾರಕ ಶ್ರೇಷ್ಟ ಕೊಂಕಣಿ ಶಿಕ್ಷಕ ಪುರಸ್ಕಾರವನ್ನು ಉದ್ಯಾವರದ ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್ ಪ್ರೌಢಶಾಲೆಯ ಶಿಕ್ಷಕಿ ತೆರೆಜಾ ಜೊಯ್ಸ್ ಪುರ್ಟಾಡೊ ಅವರಿಗೆ ನೀಡಲಾಯಿತು. ಅವರಿಗೆ 5 ಸಾವಿರ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಕಾಡೆಮಿಯ ಪ್ರಕಟಿಸಿರುವ ಹೆರೊಲ್ಪಿಯುಸ್ ಇವರು ಬರೆದ ‘ಕೊಂಕ್ಣಿ ಕ್ರಿಸ್ತಾಂವ್ ಕಾಜಾರಾಂ’ ಕೃತಿಯನ್ನು ಮೇಯರ್ ಬಿಡುಗಡೆಗೊಳಿಸಿದರು.
ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತಲಿನೊ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಮಾತಭಾಷೆ ಕಲಿಯುವ ಅಗತ್ಯ ಎಂಬ ವಿಷಯದ ಬಗ್ಗೆ ಮಣಿಪಾಲದ ಟಿ.ಎಂ.ಎ. ಪೈ ಶಿಕ್ಷಕ-ಶಿಕ್ಷಣ ಮಹಾ ವಿದ್ಯಾಲಯದ ಪ್ರಿನ್ಸಿಪಾಲ್ ಪ್ರೊ. ಮಹಾಬಲೇಶ್ವರ್ ರಾವ್ ಉಪನ್ಯಾಸ ನೀಡಿದರು. ರೊನಿ ಕ್ರಾಸ್ತಾ ಕೊಂಕಣಿ ಕ್ವಿಜ್ ನಡೆಸಿದರು. ಮುಂದಿನ ಶೈಕ್ಷಣಿಕ ವರ್ಷದ ತಯಾರಿಯನ್ನು ರಿಜಿಸ್ಟ್ರಾರ್ ಡಾ. ದೇವದಾಸ್ ಪೈ ನಡೆಸಿ ಕೊಟ್ಟರು. ಮಾಂಡ್ ಸೊಭಾಣ್ ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ಲೊರೆನ್ಸ್ ಡಿಸೊಜಾ ಮತ್ತು ಕೊಂಕ್ಣಿ ಪ್ರಚಾರ್ ಸಂಚಾಲನದ ಶೆಲ್ಡನ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ಐವನ್ ಮಸ್ಕರೇನ್ಹಸ್ ವಂದಿಸಿದರು. ಮಂಗಳಾರ ನಿಧನರಾದ ಕೊಂಕಣಿ ಮುಖಂಡ ರಘುನಾಥ್ ಶೇಟ್ ಅವರಿಗೆ ಸಭೆ ಶ್ರದ್ಧಾಂಜಲಿ ಅರ್ಪಿಸಿತು.