ಮಂಗಳೂರು,ಮಾರ್ಚ್.28 : ‘ಹಿಂದೂ ಧರ್ಮದಲ್ಲಿ ರುವ ಮೂಢ ನಂಬಿಕೆಗಳನ್ನು ಕಿತ್ತು ಹಾಕಿ ಮೂಲ ನಂಬಿಕೆಗಳನ್ನು ಉದ್ದೀಪನ ಗೊಳಿಸಬೇಕು’ ಎಂದು ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ರಾಮೋತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಮಂಡಳಿ, ದುರ್ಗಾವಾಹಿನಿ ಆಶ್ರಯದಲ್ಲಿ ನೆಹರೂ ಮೈದಾನದಲ್ಲಿ ಏರ್ಪಡಿಸಿರುವ ಶ್ರೀ ರಾಮೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಚಂಚಲ ಮನಸ್ಸಿನ ಕಪಿಗಳನ್ನು ರಾಮನ ಆದರ್ಶ ಒಗ್ಗೂಡಿಸಿತು. ವಿಶ್ವ ಹಿಂದೂ ಪರಿಷತ್ ಕೂಡಾ ಚಂಚಲ ಯುವ ಮನಸುಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ಸಮಾಜದ ಸಬಲೀಕರಣ ಸಂಘಟನೆಗಳ ಮೂಲಕ ಆಗಬೇಕು. ರಾಮನ ಆದರ್ಶ, ಹನುಮನ ಭಕ್ತಿಯನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು’ ಎಂದರು.
‘ತ್ರೇತಾಯುಗದಲ್ಲಿ ಧರ್ಮ ಮೂರು ಪಾಲು, ಅಧರ್ಮ ಒಂದು ಪಾಲು ಇತ್ತು. ದ್ವಾಪರಾ ಯುಗದಲ್ಲಿ ಧರ್ಮ ಮತ್ತು ಅಧರ್ಮ ಸಮಪಾಲು ಇತ್ತು. ಕಲಿಯುಗದಲ್ಲಿ ಧರ್ಮ ಒಂದು ಪಾಲು ಇದ್ದರೆ ಅಧರ್ಮ ಮೂರು ಪಾಲು ಇದೆ. ಹಾಗಾಗಿ ಸಮಾಜ ಘಾತುಕ ಶಕ್ತಿಗಳನ್ನು ನಿಗ್ರಹಿಸಲು ವಿಶ್ವ ಹಿಂದೂ ಪರಿಷತ್, ಬಜರಂಗದಳದಂತಹ ಸಂಘಟನೆಗಳ ಅಗತ್ಯ ಇದೆ. ಇವೆರಡು ದೇಶದ ಎರಡು ಕಣ್ಣುಗಳಿದ್ದಂತೆ’ ಎಂದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ.ಪುರಾಣಿಕ್ ಮಾತನಾಡಿ, ‘ರಾವಣ ದುಷ್ಟ ಶಕ್ತಿಯ ಸಂಕೇತ. ರಾವಣನನ್ನು ಸುಟ್ಟಂತೆ ದೇಶದ್ರೋಹಿ ಸಮಾಜ ಘಾತುಕ ಶಕ್ತಿಗಳನ್ನೂ ನಾಶ ಮಾಡಬೇಕು’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಪಾಲಿಕೆ ಸದಸ್ಯ ದಿವಾಕರ ಪಾಂಡೇಶ್ವರ, ಉದ್ಯಮಿ ಗಣೇಶ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಡಾ.ವಿಷ್ಣು ಪ್ರಭು, ವಕೀಲ ಶ್ರೀಧರ ಶೆಟ್ಟಿ ಪುಲಿಂಚ, ಬಜರಂಗದಳದ ಭುಜಂಗ ಕುಲಾಲ್, ದುರ್ಗಾವಾಹಿನಿಯ ಸುರೇಖಾ ರಾಣಿ, ರಾಜಗೋಪಾಲ ರೈ, ಪುರುಷೋತ್ತಮ ಎಚ್.ಕೆ ಮತ್ತಿತರರಿದ್ದರು.





