ಮಂಗಳೂರು,ಮಾರ್ಚ್.18 : ರಾಜ್ಯದ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿಯವರ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ, ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ, ಜಿಲ್ಲೆಯ ಅಲ್ಲಲ್ಲಿ ಪ್ರತಿಭಟನೆ ನಡೆಸಲಾಗಿದೆ. ನಗರದ ಬೆಸೆಂಟ್ ಕಾಲೇಜಿನ ಎದುರು ಎಬಿವಿಪಿ ಪ್ರತಿಭಟಿಸಿದರೆ, ಮನಪಾ ಎದುರು ಬಿಜೆಪಿ ಯುವ ಮೋರ್ಚಾ ಪ್ರತಿಭಟಿಸಿದೆ.
ಎಬಿವಿಪಿ ಪ್ರತಿಭಟನೆಯ ವೇಳೆ ಮಾತನಾಡಿದ ಸಂದೀಪ್, ರಾಜ್ಯ ಕಂಡ ದಕ್ಷ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾ ಗುತ್ತದೆ. ಅವರ ಸಾವಿನ ಕುರಿತಂತೆ ಉನ್ನತ ತನಿಖೆಯನ್ನು ನಡೆಸಬೇಕು. ಹಲವಾರು ಅಕ್ರಮಗಳಿಗೆ ಕಡಿವಾಣವನ್ನು ಹಾಕಿದ್ದ ದಕ್ಷ ಅಧಿಕಾರಿಯ ಸಾವಿನಿಂದ ಪ್ರಾಮಾಣಿಕ ಅಧಿಕಾರಿ ಗಳಿಗೆ ರಕ್ಷಣೆ ಇಲ್ಲವಾಗಿದೆ. ಈ ಸಾವಿನ ಹಿಂದೆ ರಾಜಕೀಯ ಮತ್ತು ಭೂಮಾಪಿಯಾ ಇರುವುದು ಸ್ಪಷ್ಠ. ಈ ಹಿಂದೆ ಮಲ್ಲಿಕಾರ್ಜುನ ಬಂಡೆ ಸಾವಲ್ಲೂ ನ್ಯಾಯ ಸಿಕ್ಕಿಲ್ಲ. ಡಿ.ಕೆ.ರವಿ ಸಾವಿಗೆ ನ್ಯಾಯ ದೊರಕಲೇ ಬೇಕು ಎಂದು ಅವರು ಆಗ್ರಹಿಸಿದರು.
ಇದೇ ಒತ್ತಡ ಮತ್ತು ಬೇಡಿಕೆಯನ್ನು ಮುಂದಿಟ್ಟುಕೊಂಡು ಮಂಗಳವಾರ ಸಂಜೆ ವೇಳೆಗೆ ಬಿಜೆಪಿ ಯುವ ಮೋರ್ಚಾ ಮಹಾನಗರ ಪಾಲಿಕೆ ಕಚೇರಿಯೆದುರು ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಸ್ವರಾಜ್, ಸಂಕೇತ್, ಪ್ರವೀಣ್, ಅರವಿಂದಾಕ್ಷ, ಕು. ದೀಕ್ಷಾ ಜೊತೆ ಹಲವರು ಭಾಗಹಿಸಿದರೆ, ಬಿಜೆಪಿ ಯುವ ಮೋರ್ಚಾ ಪ್ರತಿಭಟನೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು, ರವಿಶಂಕರ್ ಮಿಜಾರ್ ಜೊತೆ ಹಲವರು ಉಪಸ್ಥಿತರಿದ್ದರು.