ಮಂಗಳೂರು,ಮಾರ್ಚ್.18 : ತುಳುನಾಡ ಹೆಮ್ಮೆಯ ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದ ಹೆಸರಾಂತ ರಂಗ ಕಲಾವಿದ ಸೂಪರ್ ಸ್ಟಾರ್ ಖ್ಯಾತಿಯ ಕೆ.ಎನ್.ಟೈಲರ್ (76) ಕಳೆದ ಕೆಲವು ತಿಂಗಳಿನಿಂದ ತೀವೃ ಅಸ್ವಸ್ಥಗೊಂಡು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಬುಧವಾರದಂದು ತನ್ನ ಕೊನೆಯುಸಿರೆಳೆದರು.
ನಿರ್ಮಾಪಕ, ನಿರ್ದೇಶಕ, ನಟರಾಗಿ 9 ತುಳುಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಟೈಲರ್ ಅವರದು. ಖ್ಯಾತ ನಟಿ ಜಯಮಾಲಾ ಅವರನ್ನು ಚಿತ್ರರಂಗಕ್ಕೆ ತಂದು ನಿರ್ಮಿಸಿದ `ಕಾಸ್ ದಾಯೆ ಕಂಡನಿ’ ಚಿತ್ರರಸಿಕರ ಮನಸ್ಸಿನಲ್ಲಿ ಈಗಲೂ ಹಸಿರಾಗಿರುವ ತುಳು ಚಿತ್ರ.
ಗಣೇಶ ನಾಟಕ ಸಭಾದ ಮೂಲಕ ಟೈಲರ್ ತುಳು ರಂಗಭೂಮಿಯನ್ನು ಬೆಳೆಸಿದರು. ಬೊಂಬಾಯಿ ಕಂಡನಿ, ಪುದರ್ ಕೇನಡೆ, ಡಾ.ಶಂಕರ್, ತಮ್ಮಲೆ ಅರ್ವತ್ತನ ಕೋಲ, ಏರ್ ಮಲ್ತಿನ ತಪ್ಪು, ಶಾಂತಿ, ಕಲ್ಲದ ದೇವೆರ್, ಯಾನ್ ಸನ್ಯಾಸಿ ಆಪೆ, ಕಾಸ್ದಾಯೆಕಂಡನಿ, ಬಡಾಯಿದ ಬಂಗಾರ್ , ಕಂಡೆನಿಬುಡೆದಿ, ಇಂದ್ರನ ಆಸ್ತಿ, ಕಲ್ಜಿಗದ ವಿಶ್ವಾಮಿತ್ರ ಮೇನಕೆ, ಏರೆನ್ಲಾ ನಂಬೊಡ್ಚಿ, ದೇವೆರ್ ಕೊರ್ಪೆರ್, ಸೈನಾಗಾಂಡಲಾ ಸತ್ಯಪನ್ಲೆ, ದಾಸುನ ಮದ್ಮೆ ಕೆ.ಎನ್.ಟೈಲರ್ ಅವರ ಸೂಪರ್ ಹಿಟ್ ತುಳು ನಾಟಕಗಳು. ದಾರೆದಬುಡೆದಿ, ಪಗೆತ್ತ ಪುಗೆ, ಬಿಸತ್ತಿಬಾಬು, ತುಳುನಾಡಸಿರಿ, ಸಾವಿರಡೊರ್ತಿ ಸಾವಿತ್ರಿ, ಭಾಗ್ಯವಂತೆದಿ ಕೆ.ಎನ್.ಟೈಲರ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ ತುಳು ಚಿತ್ರಗಳು.
ನಟರಾಗಿ, ನಿರ್ದೇಶಕರಾಗಿ, ಕತೆ, ಚಿತ್ರಕತೆ, ಹಾಡು ಹೀಗೆ ಎಲ್ಲಾ ರಂಗದಲ್ಲೂ ಟೈಲರ್ ಅವರಿಗೆ ಪರಿಪೂರ್ಣತೆಯಿತ್ತು. ಅವರು ಅಕ್ಷರಸ ತುಳು ರಂಗಭೂಮಿ ಮತ್ತು ತುಳುಚಿತ್ರರಂಗವನ್ನು ಆಳಿದ್ದರು. ಅನೇಕ ಮಂದಿ, ಕಲಾವಿದರನ್ನು ರಂಗಭೂಮಿ, ಹಾಗೂ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಅವರದು.
ಇತ್ತೀಚೆಗೆ ಖಾಸಗಿ ಆಸ್ಪತ್ರೆಗ ದಾಖಲಾದಾಗ ರಾಜ್ಯ ಸರ್ಕಾರ ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿತ್ತು. ಜಿಲ್ಲಾಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕರು, ರಾಜಕಾರಣಿಗಳು ಅವರ ಯೋಗಕ್ಷೇಮ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಆಶಿಸಿದ್ದರು. ಸ್ವತ: ಜಯಮಾಲಾ ಅವರು ಟೈಲರ್ ಅನಾರೋಗ್ಯದಿಂದಿರುವುದನ್ನು ತಿಳಿದು ಮಂಗಳೂರಿಗೆ ಬಂದು ಭೇಟಿ ಮಾಡಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.ಕೆ.ಎನ್.ಟೈಲರ್ ನಿಧನದಿಂದ ತುಳು ರಂಗಭೂಮಿ ಮತ್ತು ತುಳುಚಿತ್ರರಂಗದ ಹಿರಿತಲೆ ಇನ್ನಿಲ್ಲವಾದಂತಾಗಿದೆ.
ಗಣ್ಯರ ಸಂತಾಪ :
ಹಿರಿಯ ತುಳು ನಾಟಕಕಾರ ಕೆ.ಎನ್.ಟೇಲರ್ರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತುಳು ನಾಟಕಗಳಿಗೆ ಭದ್ರ ಬುನಾದಿ ಹಾಕಲು ಕೆ.ಎನ್.ಟೇಲರ್ರ ಶ್ರಮ ಅಪಾರ. ಅವರ ಪ್ರಯತ್ನದಿಂದ ತುಳು ನಾಟಕ ಜಗತ್ತಿನ ವಿವಿಧೆಡೆ ಪ್ರದರ್ಶನಗೊಳ್ಳುವಂತಾಯಿತು. ಅವರ ಅಗಲುವಿಕೆಯು ತುಳು ನಾಟಕ ರಂಗಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ತುಳು ನಾಟಕಗಳಿಗೆ ಟಿಕೆಟ್ ಪಡೆದು, ನೋಡು ವಂತಹ ವಾತಾವರಣ ಸೃಷ್ಟಿಯಾಗಲು ಕೆ.ಎನ್.ಟೇಲರ್ರ ಅಭಿನಯ ಕಾರಣ. ಇದರಿಂದ ತುಳು ನಾಟಕ ರಂಗವು ್ಯವಸ್ಥಿತವಾಗಿ ರೂಪುಗೊಂಡಿದೆ. ಕರಾವಳಿಯ ರಂಗ ಭೂಮಿ ಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವಿಭಜಿತ ದ.ಕ.ಜಿಲ್ಲೆಯ ಸಾಂಸ್ಕೃತಿಕ ಲೋಕಕ್ಕೆ ಕೆ.ಎನ್.ಟೇಲರ್ ಅಪ್ರತಿಮವಾದ ಕೊಡುಗೆ ನೀಡಿದ್ದಾರೆ. ಅವರ ಅಭಿನಯವು ಅನನ್ಯವಾಗಿದೆ ಎಂದು ಯುವಜನಸೇವಾ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಶಾಸಕರಾದ ಬಿ.ಎ.ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸಂತಾಪ ಸೂಚಿಸಿದ್ದಾರೆ.