ಉಡುಪಿ: ಕಲಾವಿದರದ್ದು ಮತ್ತು ನಟರದ್ದು ಕೇವಲ ಚಿತ್ರದಲ್ಲಿ ಮಾತ್ರ ನಟನೆ. ಆದರೇ ಸಮುದ್ರ ಎನ್ನುವ ಯುದ್ಧಭೂಮಿಯಲ್ಲಿ ಜೀವದ ಹಂಗು ತೊರೆದು ಸಮುದ್ರದಲೆಗಳೊಡನೆ ಸೆಣಸಾಡಿ ಬದುಕು ಸಾಗಿಸುವ ಮೀನುಗಾರರು ನಿಜವಾದ ಹೀರೋಗಳು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
ಅವರು ರವಿವಾರ ಮಲ್ಪೆ ಬೀಚ್ ನಲ್ಲಿ ಆರ್.ಡಿ. ಮೆಂಡನ್ ವೇದಿಕೆ ಯಲ್ಲಿ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ನ ವಜ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ| ಜಿ. ಶಂಕರ್ ಅವರು ಮಾತನಾಡಿ, ಮೀನುಗಾರರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿ ಸರಕಾರದ ಮುಖೇನ ಅನೇಕ ಸವಲತ್ತುಗಳನ್ನು ಮೀನುಗಾರರಿಗೆ ದೊರಕಿಸಿಕೊಡುವಲ್ಲಿ ಫೆಡರೇಶನ್ ಸಫಲವಾಗಿದೆ. ಮೀನುಗಾರರ ಕೆಲವೊಂದು ಬೇಡಿಕೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.
ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಉಡುಪಿ ನಗರಸಭಾ ಅಧ್ಯಕ್ಷ ಯುವರಾಜ್, ಮೀನುಗಾರರ ಸಂಘದ ಅಧ್ಯಕ್ಷ ಎಚ್.ಟಿ. ಕಿದಿಯೂರು, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ಅವಿಭಜಿತ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ನಗರಸಭಾ ಸದಸ್ಯರಾದ ಪ್ರಶಾಂತ್ ಅಮೀನ್, ವಿಜಯ ಕುಂದರ್, ಉಡುಪಿ ತಾಲೂಕು ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳ ಬಹುಮಾನ ವನ್ನು ವಿತರಿಸಲಾಯಿತು. ಮಲ್ಪೆ ಬೀಚ್ನಲ್ಲಿ ಜನಸಾಗರವೇ ಕಾಣುತ್ತಿತ್ತು. ಬೀಚ್ ಉತ್ಸವ ನೋಡಲು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲಿ ಜನರು ಬಂದಿದ್ದರು.
ವಿವಿಧ ಸ್ಪರ್ಧೆಗಳು: ಬೆಳಗ್ಗಿನಿಂದ ಸಂಜೆ ವರೆಗೆ ಬೀಚ್ವಾಲಿಬಾಲ್, ತ್ರೋಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಈಜು ಸ್ಪರ್ಧೆ, ಮರಳು ಶಿಲ್ಪ ರಚನೆ, ಬಕ್ಸ್ಟಂಟ್, ಚಿತ್ರಬಿಡಿಸುವ ಸ್ಪರ್ಧೆ, ಶ್ವಾನ ಪ್ರದರ್ಶನ, ಸಾಂಪ್ರದಾಯಿಕ ಕೈರಂಫಣಿ ಮೀನುಗಾರಿಕೆ ಪ್ರದರ್ಶನ, ಗಾಳಿಪಟ ಪ್ರದರ್ಶನಗಳು ನಡೆದಿದ್ದು ನೋಡುಗರ ಮನಸೂರೆಗೊಂಡಿತು.