ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಇದೀಗ ಭಿನ್ನಮತ ಹೊಗೆಯಾಡುತ್ತಿದೆ.
ಕೇಜ್ರಿವಾಲ್ ಏಕಕಾಲದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಸಂಚಾಲಕ ಹುದ್ದೆ ನಿಭಾಯಿಸುತ್ತಿರುವುದು, ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ ಹಾಗೂ ದೆಹಲಿಯ ಹೊರತಾಗಿ ಇತರ ರಾಜ್ಯಗಳಲ್ಲಿ ಎಎಪಿಯ ಪಾತ್ರ…ಹೀಗೆ ಈ ಮೂರು ವಿಚಾರವಾಗಿ ಕೇಜ್ರಿವಾಲ್, ಯೋಗೇಂದ್ರ ಯಾದವ್\ ಹಾಗೂ ಪ್ರಶಾಂತ್ ಭೂಷಣ್ ಮಧ್ಯೆ ಭಿನ್ನಮತ ಎದ್ದಿದೆ ಎನ್ನಲಾಗಿದೆ.
ರಾಜೀನಾಮೆಗೆ ಮುಂದಾಗಿದ್ದ ಕೇಜ್ರಿವಾಲ್: ಗುರುವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಕೇಜ್ರಿವಾಲ್ ಗೈರುಹಾಜರಾಗಿದ್ದರು. ತಾವು ಎರಡು ಹುದ್ದೆಗಳನ್ನು ನಿಭಾಯಿಸುತ್ತಿರುವ ಬಗ್ಗೆ ಪಕ್ಷದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿರುವ ಕಾರಣ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಕಾರ್ಯಕಾರಿಣಿಯ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು.