ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು: ಇನ್ನ ಚಂದ್ರಕಾಂತ ರಾವ್ ಅವರು ತನ್ನ ಹುಟ್ಟೂರು ಇನ್ನದಲ್ಲಿ ಕೃಷಿ, ಪ್ರವಾಸೋದ್ಯಮ ಹಾಗೂ ಗ್ರಾಮೀಣ ಸ್ವಾವಲಂಬನೆಗೆ ವಿನೂತನ ಸಾಧನೆ ನಡೆಸುತ್ತಿದ್ದಾರೆ.
ಪಡುಬಿದ್ರಿ- ಫಲಿಮಾರು-ಮುಂಡ್ಕೂರು ನಡುವೆ ಶಾಂಭವಿ ನದಿ ಶಾಖೆಯ ಮಡಿಲಲ್ಲಿರುವ ನಿಸರ್ಗ ಸುಂದರ ಪ್ರದೇಶ ಇನ್ನ. ಇಲ್ಲಿ ರಾವ್ ಅವರು ತನ್ನ ಪೂರ್ವಜರ ಮನೆಯನ್ನು ಈಗಾಗಲೇ ಎಂದು ನವೀಕರಿಸಿ ಸಮಗ್ರ ಹೊಣೆಯನ್ನು ಸಂಬಂಧಿತ ಟ್ರಸ್ಟ್ಗೆ ಒಪ್ಪಿಸಿದ್ದಾರೆ. ಅಲ್ಲಿ ಶುಭ ಕಾರ್ಯಗಳಿಗೆ ಸೇವಾ ರೂಪದಲ್ಲಿ ಸಭಾಂಗಣ ನಿರ್ಮಿಸಿದ್ದಾರೆ. ಆದರೆ, ಅವರ ಸಾಧನೆಗೆ ಗರಿ ಮೂಡಿರುವುದು ಪಕ್ಕದಲ್ಲಿ ಅವರು ಎಂಟು ಎಕರೆ ಜಮೀನು ಖರೀಸಿ ನಿರ್ಮಿಸಿದ ಪ್ರಕೃತಿ ಫ್ರುಟ್ ಫಾರ್ಮ್ ಮತ್ತು ಥೈಲ್ಯಾಂಡ್ನಿಂದ ಮರಸಹಿತ ತರಿಸಿ ನಿರ್ಮಿಸಿದ ಸುಕಾಂತಾಯಿ ಎಂಬ ಅತಿಥಿ ಗೃಹದ ಮೂಲಕ.
ಇದು ಜಿಲ್ಲೆಯ, ರಾಜ್ಯದ ಎಲ್ಲಿಯೂ ಕಾಣ ಸಿಗದ ವಿಶಿಷ್ಟ ಮನೆ. ಈ ಮನೆಗೆ ಪೈಂಟ್ ಇಲ್ಲ…, ಸಿಮೆಂಟ್ ಬಳಸಲಾಗಿಲ್ಲ… ಬದಲಾಗಿ ಕೇವಲ ಮರಗಳಿಂದಲೇ ನಿರ್ಮಿಸಿದ ಆಕರ್ಷಕ ಮನೆ. ಇನ್ನೂ ವಿಶೇಷವೆಂದರೆ ಇಂತಹ ಮನೆಗಳಿರುವುದು ಥಾೈಲ್ಯಾಂಡ್ ದೇಶದಲ್ಲಿ ಮಾತ್ರ.
ಈ ಮನೆಯ ಹೆಸರು `ಸುಕಾಂಥಾೈ’ ಕಾಟೇಜ್. ಅಂದರೆ ಸು= ಸುಪ್ರಿಯಾ, ಕಾಂತ= ಚಂದ್ರಕಾಂತ, ಐ= ಇನ್ನಾ. ಇದು ಈ ಮನೆಯ ಮಾಲಕರ ಹೆಸರು ಮತ್ತು ಅವರ ಊರ ಹೆಸರು….! ಈ ಹೆಸರು ಥಾೈಲ್ಯಾಂಡ್ ದೇಶದಲ್ಲಿ ಕೇಳಿ ಬರುವಂತದ್ದು. ಅಷ್ಟೇ ಅಲ್ಲ… ಈ ಮನೆ ನಿರ್ಮಾಣಕ್ಕೆ ಬಳಸಲಾಗಿದ್ದು ಥಾೈಲ್ಯಾಂಡ್ ದೇಶದ ಮರಗಳನ್ನೇ. ಅಲ್ಲಿನ ವಿನ್ಯಾಸಕಾರರನ್ನೇ ಕರೆಸಿ ಈ ಮನೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಹಡಗಿನ ಮೂಲಕ ಮಂಗಳೂರಿಗೆ ತರಿಸಿ ನಿರ್ಮಾಣ ಮಾಡಿರುವುದು ಸೋಜಿಗವೇ ಸರಿ.
ಇಂಡಾಲ್, ಮೈಕೋ ಮುಂತಾದ ಐದು ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಅನುಭವ ಹೊಂದಿ, ಸ್ವಯಂ ನಿವೃತ್ತಿ ಪಡೆದುಕೊಂಡ ಚಂದ್ರಕಾಂತ್ ರಾವ್ ಬಳಿಕ ಮುಖ ಮಾಡಿದ್ದು ಗ್ರಾಮೀಣ ಪ್ರದೇಶವಾದ ಇನ್ನಾದತ್ತ. ಅವರಿಗೆ ಕೃಷಿಯತ್ತ ಹೆಚ್ಚಿನ ಒಲವು. ಥಾೈಲ್ಯಾಂಡ್ ದೇಶದ ಮರದ ಮನೆಗಳೆಂದರೆ ಅವರಿಗೆ ಅಚ್ಚುಮೆಚ್ಚು. ತಾನೂ ಗ್ರಾಮೀಣ ಪ್ರದೇಶವಾದ ಇನ್ನಾದಲ್ಲಿ ಇಂತಹ ಮನೆ ಕಟ್ಟಬೇಕೆಂದು ಕನಸು ಕಟ್ಟಿಕೊಂಡವರು. ಅವರು ಕನಸು ಕಟ್ಟಿಕೊಳ್ಳುವುದರ ಜತೆ ಥಾೈಲ್ಯಾಂಡ್ನ ವಿಶಿಷ್ಟ ಮನೆಯೂ ಕಟ್ಟಿಬಿಟ್ಟರು.
ಥಾೈಲ್ಯಾಂಡ್ ಮಾದರಿ ಈ ಫಾರ್ಮ್ ಹೌಸ್ ನೋಡುವುದೇ ಕಣ್ಣಿಗೆ ಹಬ್ಬ. ಮರದ ದಿಮ್ಮಿಗಳನ್ನೇ ಅಡಿಪಾಯವಾಗಿ ಬಳಸಿ ಮರದಿಂದಲೇ ಕೊಠಡಿಗಳನ್ನು ನಿರ್ಮಿಸಲಾಗಿದೆ. ಎರಡು ಬೆಡ್ ರೂಮ್, ಬಾತ್ ರೂಮ್, ಕಿಚನ್, ಹಾಲ್ ಹೊಂದಿರುವ ಈ ಮನೆಯ ಬೆಡ್ ರೂಮ್ಗಳಿಗೆ ಏರ್ ಕಂಡೀಷನ್ ಅಳವಡಿಸಲಾಗಿದೆ. ಥಾೈಲ್ಯಾಂಡ್ ದೇಶದ ಗ್ರೀನ್ ಟೀಕ್ ಜಾತಿಯ ಸುಮಾರು 32 ರಿಂದ 35 ವರ್ಷಗಳಷ್ಟು ಹಳೆಯ ಮರಗಳನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ.
ಚಂದ್ರಕಾಂತ್ ಅವರ ಕನಸನ್ನು ಸಾಕಾರಗೊಳಿಸಲು ನೆರವಾದವರು ಅವರ ಆತ್ಮೀಯ ಸ್ನೇಹಿತ ಥಾೈಲ್ಯಾಂಡ್ನ ನಟ್ಟಪೂಮ್ ರಕ್ಸಕುಲ್. ಅವರು ಥಾೈಲ್ಯಾಂಡ್ನ ಕಾಂಚನಪುರಿ ಪ್ರದೇಶದ ಸಣ್ಣ ತಂಡದೊಂದಿಗೆ ಇನ್ನಾಕ್ಕೆ ಬಂದು ಮೂರು ತಿಂಗಳೊಳಗೆ ಮನೆಯ ನಿರ್ಮಾಣ ಮಾಡಿ ಮುಗಿಸಿದರು. ಮನೆ ನಿರ್ಮಾಣದಲ್ಲಿ ಸ್ಥಳೀಯ 12 ಮಂದಿ ಬಡಗಿಗಳು ಶ್ರಮಿಸಿದ್ದರು. ಜತೆಗೆ ಮಂಗಳೂರಿನ ಕಿಶೋರ್ ಸುವರ್ಣ ಅವರು ಮನೆ ನಿರ್ಮಾಣ ಯಶಸ್ವಿಯಾಗಲು ಸಹಕರಿಸಿದ್ದರು.
ಖ್ಯಾತ ಶಿಕ್ಷಕಿ ದಿ| ಇನ್ನ ದಿನೇಶ್ ರಾವ್-ವಿಮಲಾ ಡಿ. ರಾವ್ ದಂಪತಿಯ ಪುತ್ರ ಚಂದ್ರಕಾಂತ ರಾವ್ ಅವರು ಆಗಿನ ಕೆಆರ್ಇಸಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಮೂರು ಎಂಬಿಎ ಓದಿ ಇತ್ತೀಚೆಗಿನ ವರೆಗೆ ಆದಿತ್ಯಾ ಬಿರ್ಲಾ ಗ್ರೂಪ್ನ ಸ್ವಿಸ್ ಸಿಂಗಾಪುರ್ ಓವರ್ಸಿಸ್ ಎಂಟರ್ಪ್ರೈಸಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದವರು. ಅಲ್ಲಿನ ದುಡಿಮೆಯನ್ನು ಹುಟ್ಟೂರಿನಲ್ಲಿ ವಿಶೇಷ ಸಾಧನೆಗೆ ಪರಿವರ್ತಿಸಿದರು.
ಕೃಷಿ ಕ್ರಾಂತಿ ; ಪ್ರಕೃತಿ ಫ್ರುಟ್ ಫಾರ್ಮ್
ವಿಶ್ರಾಂತ ಜೀವನ ನಡೆಸುತ್ತಿರುವ ಚಂದ್ರಕಾಂತ್ ಅವರಿಗೆ ಕೃಷಿಯ ಮೇಲೆ ಹೆಚ್ಚಿನ ಒಲವು. ಇನ್ನಾದಲ್ಲಿ ಸುಮಾರು ಎಂಟೂವರೆ ಎಕರೆ ಭೂಮಿಯನ್ನು ಖರೀದಿಸಿ ಅದರಲ್ಲಿ ಹಣ್ಣು ಹಂಪಲುಗಳನ್ನು ಬೆಳೆಸುವ ನಿರ್ಧಾರಕ್ಕೆ ಬಂದರು. ಎರಡೂ ಬದಿಯಲ್ಲಿ ತೊರೆಗಳನ್ನು ಹೊಂದಿರುವ ಫಲವತ್ತಾದ ಭೂಮಿಯಲ್ಲಿ ಅವರು ಹತ್ತಾರು ಬಗೆಯ ಫಲ ನೀಡುವ ಗಿಡಗಳನ್ನು ನೆಟ್ಟಿದ್ದಾರೆ.
ಪ್ರಕೃತಿ ಫಾರ್ಮ್ನಲ್ಲಿ ದೇಶ ವಿದೇಶಗಳ ವೃಕ್ಷ, ಫಲ, ಹೂಗಳ ವೈವಿಧ್ಯವಿದೆ. ಸಮಾನ ವಿಸ್ತಾರದಲ್ಲಿ ಮಾವು, ಚಿಕ್ಕೂ, ಪೇರಳೆ, ಬಾಳೆ, ತಾಳೆ, ರಾಂಬೂಟಾನ್, ಮ್ಯಾಂಗೋಸ್ಟೀನ್ ಮುಂತಾದವು ಈಗಾಗಲೇ ತುಂಬುಫಲ ನೀಡುತ್ತಿವೆ. ದೇಶ ವಿದೇಶಗಳ ತಳಿ ಇಲ್ಲಿದೆ.
ದೇಶೀಯ ಮಾತ್ರವಲ್ಲದೆ ಥಾೈಲ್ಯಾಂಡ್, ಚೀನಾ ದೇಶದ ಲಿಚಿ, ರಂಬುಟಾನ್, ಪೇರಳೆ, ಕಾಂಬೋಡಿಯಾದ ಮಿಲ್ಕ್ ಫ್ರುಟ್, ಚಿಕ್ಕು, ಮ್ಯಾಂಗೋಸ್ಟೀಮ್ ಸುಮಾರು 10 ವಿವಿಧ ತಳಿಯ ಮಾವಿನ ಗಿಡಗಳು, 15 ವಿವಿಧ ತಳಿಯ ಹಲಸು, ಅನನಾಸು, ಪಪ್ಪಾಯಿ, ತೆಂಗು ಮುಂತಾದ ಗಿಡಗಳನ್ನು ಬೆಳೆಸಿದ್ದಾರೆ. ಇವುಗಳಲ್ಲಿ ಕೆಲ ಗಿಡಗಳು ಫಲ ನೀಡಲಾರಂಭಿಸಿವೆ. ಮೊಂದಿನ ಎರಡು- ಮೂರು ವರ್ಷಗಳಲ್ಲಿ ಬಹುತೇಕ ಎಲ್ಲಾ ಹಣ್ಣಿನ ಮರಗಿಡಗಳು ಫಲ ನೀಡುತ್ತದೆ ಎನ್ನುತ್ತಾರೆ ಚಂದ್ರಕಾಂತ್. ಚಂದ್ರಕಾಂತ್ ಅವರ ಹಣ್ಣು ಹಂಪಲು ಕೃಷಿಗೆ ಕೊಚ್ಚಿನ್, ಕಾರ್ಕಳ, ನಾರಾವಿ, ಹಿರಿಯಡ್ಕ, ಬೆಳ್ತಂಗಡಿ, ಪುತ್ತೂರು, ಕುಂದಾಪುರ ಮುಂತಾದ ಪ್ರದೇಶಗಳ ಕೃಷಿ ತಜ್ಞರು ಮಾರ್ಗದರ್ಶನ ನೀಡಿದ್ದಾರೆ.
8,000 ಚ. ಅಡಿಯ ಹುಲ್ಲುಹಾಸು
`ಸುಕಾಂಥಾೈ’ ಕಾಟೇಜ್ ಪಕ್ಕದಲ್ಲೇ ಹಸಿರು ಹುಲ್ಲು ಹಾಸಿನ ಬಯಲಿದೆ. ಸುಮಾರು ಎಂಟು ಸಾವಿರ ಚದರ ಅಡಿಯ ಈ ಲಾನ್ನ ಮಧ್ಯ ಭಾಗದಲ್ಲಿ ಒಂದು ಸ್ಟೇಜ್ ಕೂಡಾ ಮಾಡಲಾಗಿದೆ. ಇದರಲ್ಲಿ ಸಂತಸ ಕೂಟ, ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಜೊತೆಗೆ ತೋಟದ ಬಗೆಬಗೆಯ ವೃಕ್ಷ ಸಂಪತ್ತು ವೀಕ್ಷಿಸಬಹುದು. ಇದನ್ನು ಬಾಡಿಗೆಗೂ ನೀಡುವ ಉದ್ದೇಶ ಹೊಂದಿರುವ ಚಂದ್ರಕಾಂತ್ ಅವರು ಇದರಲ್ಲಿ ಸಂಗ್ರಹವಾಗುವ ಹಣವನ್ನು ಟ್ರಸ್ಟ್ಗೆ ವಿನಿಯೋಗಿಸಲು ಯೋಜಿಸಿದ್ದಾರೆ
ಎಬಿಸಿಡಿ ಎಂಡ್ ಇ ಟ್ರಸ್ಟ್
ಸರಳ, ಸಜ್ಜನಿಕೆ ವ್ಯಕ್ತಿತ್ವ ಚಂದ್ರಕಾಂತ್ ಅವರದ್ದು. ಗ್ರಾಮೀಣ ಜನರಿಗೂ ಉತ್ತಮ ಶಿಕ್ಷಣ ಸಿಗಬೇಕೆಂಬ ಹಂಬಲ, ಸಹಾಯ ಮನೋಭಾವ ಹೊಂದಿರುವ ಅವರು `ಅದ್ವೈತ ಭಾರತೀಯ ಕಮ್ಯುನಿಟಿ ಡೆವಲಪ್ಮೆಂಟ್ ಎಂಡ್ ಎಜುಕೇಶನ್'(ಎಬಿಸಿಡಿ ಎಂಡ್ ಇ) ಎಂಬ ಟ್ರಸ್ಟನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಅವರು ಈಗಾಗಲೇ ಇನ್ನ ಪರಿಸರದ ಗ್ರಾಮಗಳಲ್ಲಿ ಅನೇಕ ಸಮಾಜಮುಖೀ ಸೇವಾಕಾರ್ಯನಿರತರಾಗಿದ್ದಾರೆ.
ಈ ಟ್ಟಸ್ಟಿನ ಮೂಲಕ ಇನ್ನಾ, ಪಲಿಮಾರು, ಬೆಳ್ಮಣ್ಣು, ಕೆದಿಂಜೆ ಗ್ರಾಮಗಳ ನಾಲ್ಕು ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ನಡೆಸಲಾಗುತ್ತಿದೆ. ಜತೆಗೆ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಆಸಕ್ತರಿಗೆ ಉಚಿತ ಟ್ಯೂಶನ್ ನೀಡಲಾಗುತ್ತಿದೆ. ಮಾತ್ರವಲ್ಲದೆ, ಇನ್ನಾದ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ಗಳನ್ನು ನೀಡಿ ಅದಕ್ಕಾಗಿ ಟ್ರಸ್ಟಿನಿಂದ ಓರ್ವ ಶಿಕ್ಷಕಿಯನ್ನೂ ನೇಮಿಸಲಾಗಿದೆ. ಡಾ.ಜನಾರ್ದನ ಭಟ್ ಬೆಳ್ಮಟ್ ಅವರ ರಚಿಸಿರುವ `ಕನ್ನಡದ ಮೂಲಕ ಇಂಗ್ಲೀಷ್’ ಪುಸ್ತಕ ಮುದ್ರಣಕ್ಕೆ ಸಹಕಾರ ನೀಡಲಾಗಿದೆ.
ಪ್ರತೀ ವರ್ಷ ಸುಂಆರು 700 ಮಂದಿ ವಿದ್ಯಾರ್ಥಿಗಳು ಈ ಉಚಿತ ಕೋರ್ಸ್ಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಸುಮಾರು 600 ಮಂದಿ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಬರೆಯುವ ಪುಸ್ತಕಗಳನ್ನು ನೀಡಲಾಗುತ್ತಿದೆ. “ಪರಿಸರದ ನಾಲ್ಕು ಶಾಲೆಗಳ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಆಂಗ್ಲ ಭಾಷಾ ತರಬೇತಿ ಶಿಬಿರ ನಡೆಸುತ್ತಿದ್ದೇವೆ. ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೌಕರ್ಯ ಒದಗಿಸುತ್ತಿದ್ದೇವೆ. ಗ್ರಾಮದಲ್ಲಿ ಶೌಚಾಲಯ ಒದಗಣೆ ಇತ್ಯಾದಿ ನಡೆಸುತ್ತಿದ್ದೇವೆ. ಲಾನ್ ಸೌಲಭ್ಯದಿಂದ ದೊರೆಯಲಿರುವ ಆದಾಯ ಸಂಪೂರ್ಣವಾಗಿ ಈ ಸೇವಾಕಾರ್ಯಕ್ಕೆ ನೀಡುತ್ತೇವೆ. ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೇ ಸಂಪೂರ್ಣವಾಗಿ ಅರ್ಪಣೆಯಾಗಬೇಕೆಂಬುದು ನನ್ನ ಹಂಬಲ” ಎಂದು ಅವರು ಬುಧವಾರ ತಮ್ಮನ್ನು ಈ ಫಾರ್ಮ್ನಲ್ಲಿ ಭೇಟಿಯಾದ ಮಂಗಳೂರಿನ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಉದಯವಾಣಿ ಪತ್ರಿಕೆ ಮಂಗಳೂರು ಸುದ್ಧಿ ವಿಭಾಗದ ಮುಖ್ಯಸ್ಥ ಮನೋಹರ ಪ್ರಸಾದ್ ಅವರು ಪೂರಕ ಮಾಹಿತಿ ನೀಡಿದರು. ಎಬಿಸಿಡಿ ಎಂಡ್ ಇ ಟ್ರಸ್ಟ್ನ ಟ್ರಸ್ಟಿಗಳಾದ ವಿಮಲಾ ಡಿ. ರಾವ್, ಸುಪ್ರಿಯಾ ಚಂದ್ರಕಾಂತ ರಾವ್ ಉಪಸ್ಥಿತರಿದ್ದರು.