ಮಂಗಳೂರು,ಫೆ.25 : ನಗರದ ಇನ್ಸ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ಸಂಸ್ಥೆಯ ಆಶ್ರಯದಲ್ಲಿ ಹೂಡಿಕೆದಾರರ ಅನುಕೂಲಕ್ಕಾಗಿ ವಣಿ ಹೂಡಿಕೆಯ ಬಗ್ಗೆ ಮಾಹಿತಿ ಮತ್ತು ಜನ ಜಾಗೃತಿ ಉಪನ್ಯಾಸವು ನಗರದ ಪಿ.ಡಬ್ಲ್ಯು.ಡಿ. ಮಿನಿ ಸೌಧ ಸಭಾಂಗಣದಲ್ಲಿ ಜರಗಿತು.
ಬೆಂಗಳೂರು ಮೂಲದ ಖ್ಯಾತ ಹಿರಿಯ ವಿತ್ತ ಮತ್ತು ಆರ್ಥಿಕ ಸಲಹೆಗಾರ ಹಾಗೂ ತರಬೇತುಗಾರರಾದ ಶ್ರೀ ಟಿ. ಶ್ರೀಶಾ ರಾವ್ ರವರು ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಜೀವ ವಿಮಾ ಸಂಸ್ಥೆ ಮತ್ತು ಮ್ಯೂಚುವಲ್ ಫಂಡ್ಸ್ ಸಂಸ್ಥೆಗಳಲ್ಲಿ ಹೂಡಿಕೆಯ ಬಗ್ಗೆ ಮಾರ್ಗದರ್ಶನ, ದೇಶದ ಆರ್ಥಿಕ ಪ್ರಗತಿ ಮತ್ತು ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಲಾಭಗಳಿಸುವ ಬಗ್ಗೆ ಹಾಗೂ ಅದಕ್ಕೆ ಅನ್ವಯವಾಗುವ ಆದಾಯ ತೆರಿಗೆ ವಿನಾಯಿತಿಯ ಬಗ್ಗೆ ವಿವರಿಸಿದರು. ಬಳಿಕ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು.
ಕಾರ್ಯನಿರ್ವಾಹಕ ಇಂಜಿನಿಯರ್, ಪಿ.ಡಬ್ಲ್ಯು.ಡಿ., ಬಂದರು ಮತ್ತು ಆಂತರಿಕ ಜಲ ಸಾರಿಗೆ ಇಲಾಖೆ ಎ.ಜಿ. ಧರ್ಮರಾಜ್ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಿರ್ಲಾ ಸನ್ ಲೈಫ್ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಸುನಿಲ್ ಜಾದಾ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.
ಐ.ಸಿ.ಎಸ್.ಐ. ಮಂಗಳೂರು ಶಾಖೆಯ ಅಧ್ಯಕ್ಷ ಸಿ.ಎಸ್.ನರಸಿಂಹ ಪೈ ಯವರು ಸ್ವಾಗತಿಸಿದರು. ಕು| ಶಿಬಾನಿ ಧನ್ಯವಾದ ನೀಡಿದರು.