ಉಡುಪಿ: ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಬರುತಿದ್ದ ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕು ಸವಾರ ದಂಪತಿಗಳು ರಸ್ತೆಗೆಸೆಯಲ್ಪಟ್ಟಿದ್ದು, ಮಹಿಳೆ ಲಾರಿಯ ಚಕ್ರದಡಿಗೆ ಸಿಕ್ಕು ಧಾರುಣವಾಗಿ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ಆಕಾಶವಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸೋಮವಾರ ಸಂಜೆ ಸುಮಾರಿಗೆ ಸಂಭವಿಸಿದೆ.
ಉಡುಪಿ ತಾಲೂಕಿನ ಸಾಸ್ತಾನ ನಿವಾಸಿ ಜ್ಯೋತಿ (28) ಎನ್ನುವವರು ಅಪಘಾತದಲ್ಲಿ ಮೃತಪಟ್ಟಿದ್ದು, ಇವರ ಪತಿ ಬೈಕ್ ಸವಾರ ನಾಗೇಂದ್ರ ಅವರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನೆ ವಿವರ: ಬ್ರಹ್ಮಾವರ ಬೋರ್ಡ್ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿರುವ ಜ್ಯೋತಿ ಅವರು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಸಾಸ್ತಾನದ ನಾಗೇಂದ್ರ ಅವರನ್ನು ವಿವಾಹವಾಗಿದ್ದರು. ನಾಗೇಂದ್ರ ಅವರು ಉಡುಪಿಯ ಕೋರ್ಟಿನಲ್ಲಿ ಉದ್ಯೋಗಿಯಾಗಿದ್ದು ಇಬ್ಬರಿಗೂ 2ವರ್ಷದ ಮಗುವಿದೆ. ಸೋಮವಾರ ಸಂಜೆ ಶಾಲೆಯಿಂದ ಮನೆಗೆ ವಾಪಾಸ್ಸಾಗುವ ಸಲುವಾಗಿ ಬ್ರಹ್ಮಾವರ ಬಸ್ಸು ನಿಲ್ದಾಣದಲ್ಲಿ ನಿಂತಿದ್ದ ವೇಳೆ ಉಡುಪಿಯಿಂದ ತನ್ನ ಕೆಲಸ ಮುಗಿಸಿ ಬಂದ ನಾಗೇಂದ್ರ ಅವರು ತಮ್ಮ ಪತ್ನಿ ಜ್ಯೋತಿಯವರನ್ನು ತಮ್ಮದೇ ಬೈಕಿನಲ್ಲಿ ಕೆರೆದುಕೊಂಡು ಬಂದಿದ್ದಾರೆ. ಈ ವೇಳೆ ಬ್ರಹ್ಮಾವರ ಆಕಾಶವಾಣಿ ಸಮೀಪದ ಪೆಟ್ರೋಲ್ ಪಂಪೊಂದರ ಎದುರು ಬರುತ್ತಿರುವಾಗ ಹಿಂಬದಿಯಿಂದ ಲಾರಿಯೊಂದು ಬಂದು ಡಿಕ್ಕಿಯಾಗಿದೆ. ಡಿಕ್ಕಿ ಪರಿಣಾಮ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ಜ್ಯೋತಿಯವರು ಬಲಭಾಗಕ್ಕೆ ಉರುಳಿದ ಪರಿಣಾಮ ಲಾರಿಯ ಚಕ್ರವು ಅವರ ತಲೆಭಾಗದ ಮೇಲೆ ಹರಿದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ನಾಯಕ್ ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಗಿರೀಶ್ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.