ರಾಷ್ಟ್ರ ಕವಿ ಕುವೆಂಪು ನಿಜವಾದ ಮಣ್ಣಿನ ಮಗ – ವಸಂತ ಶೆಟ್ಟಿ ಬೆಳ್ಳಾರೆ
ಕುಂದಾಪುರ: ಪ್ರಕೃತಿಯನ್ನೇ ಆಧಾರವಾಗಿಟ್ಟುಕೊಂಡು ನಾಟಕ, ಸಾಹಿತ್ಯ, ಕವನಗಳನ್ನು ರಚಿಸುವುದರ ಜೊತೆಗೆ ಕನ್ನಡದ ಜಾಡನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ ರಾಷ್ಟ್ರ ಕವಿ ಕುವೆಂಪು ನಿಜವಾದ ಮಣ್ಣಿನ ಮಗಎಂದು ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು.
ಅವರು ಮುಂಬೈನ ಮಾಟುಂಗದ ಕರ್ನಾಟಕ ಸಂಘ ಮುಂಬೈ ಇವರು ಮಾಟುಂಗದ ಶ್ರೀ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ 19ನೇ ರಾಷ್ಟ್ರ ಮಟ್ಟದ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ನೆನಪಲ್ಲಿ ಕಳೆದ ಹತ್ತೊಂಬತ್ತು ವರ್ಷಗಳಿಂದ ರಾಷ್ಟ್ರ ಮಟ್ಟದ ನಾಟಕೋತ್ಸವಗಳನ್ನು ಆಯೋಜಿಸಿ ಯಶಸ್ವಿಯಾದ ಕರ್ನಾಟಕ ಸಂಘದ ಹೊರನಾಡ ಕನ್ನಡಿಗರ ಸಾಧನೆ ಶ್ಲಾಘನೀಯ ಎಂದ ಅವರು, ಕನ್ನಡ ಸಾಹಿತಿಗಳ ಸಾಹಿತ್ಯಗಳನ್ನು ನಾವೆಲ್ಲರೂ ಕಿಂಚಿತ್ ಪ್ರಮಾಣದಲ್ಲಿಯಾದರೂ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಹೊರನಾಡ ಕನ್ನಡಿಗರು ಪ್ರಯತ್ನಿಸಬೇಕಾಗಿದೆ ಎಂದವರು ಹೇಳಿದರು.
ಕನ್ನಡ ಭಾರತಿ 1960-70ರಲ್ಲಿ ಅತ್ಯಂತ ಉತ್ತಮ ನಾಟಕಗಳನ್ನು ಕನ್ನಡ ರಂಗಭೂಮಿಗೆ ಕೊಟ್ಟ ಸಂಸ್ಥೆ. ಕಳೆದು ಹೋದ ಕನ್ನಡ ಭಾರತಿ ಸಂಸ್ಥೆಯ ನೆನಪಿಗಾಗಿ ದೆಹಲಿ ಕನ್ನಡ ಸಂಘದ ಕನ್ನಡ ಭಾರತಿ ಪ್ರಶಸ್ತಿ ಎನ್ನುವ ಐವತ್ತು ಸಾವಿರ ರೂಪಾಯಿಗಳ ಮೊತ್ತವುಳ್ಳ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, ರಂಗದ ಹಿಂದೆ ಮತ್ತು ಮುಂದೆ ಮತ್ತು ಬರಹಗಾರರಿಗೆ ನೀಡಲಾಗುತ್ತದೆ. ಈ ಬಾರಿ ಕನ್ನಡ ಭಾರತಿ ಸಂಸ್ಥೆಯ ಸೂತ್ರಧಾರರಾಗಿದ್ದ ಎಂ.ವಿ.ನಾರಾಯಣ ರಾವ್ ಅವರಿಗೆ ನೀಡಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಸಮಿತಿ ರಚನೆ ಮಾಡಿ ನಿರ್ಣಯ ಮಾಡಲಾಗುತ್ತದೆ. ಮುಂದಿನ ಬಾರಿ ಅದರ ಮೊತ್ತ ಒಂದು ಲಕ್ಷದ ಒಂದು ಸಾವಿರ ಮೊತ್ತವನ್ನು ನೀಡಲು ಭಿನ್ನಹ ಮಾಡಲಾಗಿದೆ ಎಂದವರು ಹೇಳಿದರು.
ಕಲಾವಿದರನ್ನು ಗೌರವಿಸಿ: ಕಲಾವಿದರನ್ನು ಗೌರವಿಸುವ ಕೆಲಸವಾಗಬೇಕು ಆಗ ಮಾತ್ರ ಕನ್ನಡ ರಂಗಭೂಮಿ, ಸಾಹಿತ್ಯ ಬೆಳೆಯಲು ಸಾಧ್ಯ ಎಂದವರು ಹೇಳಿದರು. ನಾಟಕಗಳಲ್ಲಿ ಸ್ಪರ್ಧೆ ಇರಬಾರದು. ಯಾಕೆಂದರೆ ಎಲ್ಲಾ ಕಲಾವಿದರೂ ವೇದಿಕೆ ಮೇಲೆ ಅಭಿನಯಿಸುವ ಪಾತ್ರಗಳು ಆ ಕ್ಷಣದ ಬದುಕು. ಹಾಗಾಗಿ ಕಲೆಗೆ ಬಲೆ ಕಟ್ಟಿ ಮಿತಿ ಹೇರುವುದು ಸರಿಯಲ್ಲ. ಪ್ರತಿಯೊಬ್ಬ ಕಲಾವಿದನೂ ಮಾಡುವ ನಟನೆ ಇನ್ನೊಬ್ಬನಿಗೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕಲಾವಿದರೆಲ್ಲರನ್ನೂ ಗೌರವಿಸುವ ಕೆಲಸವಾದಾಗ ಮಾತ್ರ ರಂಗಭೂಮಿ ಬೆಳೆಯಲು ಸಾಧ್ಯ ಎಂದವರು ಹೇಳಿದರು.
ಸಭಾಧ್ಯಕ್ಷತೆಯನ್ನು ಕರ್ನಾಟಕ ಸಂಘ, ಮುಂಬೈ ಇದರ ಉಪಾಧ್ಯಕ್ಷ ಶ್ರೀನಿವಾಸ ಜಕಟ್ಟೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಕೋಶಾಧಿಕಾರಿ ಎನ್.ಎಂ.ಗುಡಿ, ತೀರ್ಪುಗಾರರಾದ ಡಾ. ಬಿ. ಆನಾರ್ಧನ ಭಟ್, ಮಂಜುನಾಥ ಶೆಟ್ಟಿ, ಪ್ರತಿಭಾ ವಿ. ಉಪಸ್ಥಿತರಿದ್ದರು. ಕರ್ನಾಟಕ ಸಂಘದ ಮಾಜೀ ಅಧ್ಯಕ್ಷ ಭರತ್ ಕುಮಾರ್ ಪೊಲಿಪು ಕಾರ್ಯಕ್ರಮ ನಿರ್ವಹಿಸಿದರು.